ಸುದ್ದಿ ಸಂಗ್ರಹ ಕಲಬುರಗಿ
ಮಹಿಳೆಯರು ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿಯೆ ಇಡಿ ಜೀವನ ಕಳೆಯಬೇಕಾದ ಅಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ, ಅವರಿಗೆ ಶಿಕ್ಷಣ ನೀಡಿ, ಸಬಲೀಕರಣಕ್ಕೆ ಮುನ್ನುಡಿ ಬರೆದ ಅಕ್ಷರವ್ವ ಸಾವಿತ್ರಿಬಾ ಫುಲೆ ಅವರ ಕೊಡುಗೆ ಅವಿಸ್ಮರಣಿಯ ಎಂದು ಮುಖ್ಯ ಶಿಕ್ಷಕಿ ನಸೀಮುನ್ನಿಸಾ ಬೇಗಂ ಹೇಳಿದರು.
ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿನ ಕಸ್ತೂರಬಾ ಬಾಲಿಕಾ ವಸತಿ ಶಾಲೆಯಲ್ಲಿ ಶಾಲೆ ಮತ್ತು ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಬೆಳಿಗ್ಗೆ ಜರುಗಿದ ಸಾವಿತ್ರಿಬಾ ಫುಲೆ ಅವರ 195ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಅಕ್ಷರದ ಮಾತೆ ಸಾವಿತ್ರಿಬಾ ಫುಲೆ ಅವರು, ದೇಶದ ಮೊದಲ ಶಿಕ್ಷಕಿಯಾಗಿದ್ದಾರೆ. ತಮ್ಮ ಪತಿಯ ಜೊತೆಗೂಡಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳು ಮಾಡಿದ್ದಾರೆ. ಸತಿಸಹಗಮನ ಪದ್ಧತಿಯ ನಿರ್ಮೂಲನೆ, ಜಾತಿ ಪದ್ಧತಿ ನಾಶ, ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಸಮಾಜಪರ ಕಾರ್ಯಗಳು ಮಾಡಿದ್ದಾರೆ. ಅವರು ಸಾಕಷ್ಟು ತೊಂದರೆ ಅನುಭವಿಸಿ, ದೇಶಕ್ಕಾಗಿ ಸಲ್ಲಿಸಿದ ಸೇವೆ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಅಸ್ಲಾಂ ಶೇಖ್, ಶಾಲೆಯ ಶಿಕ್ಷಕಿಯರಾದ ಶ್ರೀದೇವಿ, ಸುವರ್ಣಾ, ಶೈಲಜಾ, ಅಂಬಿಕಾ, ಈರಮ್ಮ ಹಾಗೂ ಸಿಬ್ಬಂದಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿದ್ಯಾರ್ಥಿನಿ ರವಿನಾ ಸಾವಿತ್ರಿಬಾ ಫುಲೆ ಅವರ ವೇಷ ಧರಿಸಿ ಸಂಭ್ರಮಿಸಿದಳು.