ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಹತ್ತಿರ
ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಮಂಗಳವಾರ ಬೆಳಿಗ್ಗೆ
ಪ್ರವಾಹ ಕಡಿಮೆಯಾಗಿ ಕಳೆದ 30 ಗಂಟೆಗಳ ಕಾಲ
ಮುಳುಗಡೆಯಾಗಿದ್ದ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಸೇತುವೆ ಮೇಲೆ ದುರಸ್ತಿ ಮಾಡಿದ್ದ ರಸ್ತೆ ಅಲ್ಲಲ್ಲಿ ಪ್ರವಾಹದ ರಭಸಕ್ಕೆ ಕಿತ್ತು ಹೋಗಿದೆ. ವಾಹನಗಳ ಸಂಚಾರ ಇನ್ನೂ ಪ್ರಾರಂಭವಾಗಿಲ್ಲ. ಬೈಕ್, ಕಾರು, ಜೀಪು ಸಂಚಾರಕ್ಕೆ ಸಮಸ್ಯೆಯಿಲ್ಲ. ಸೇತುವೆ ಮೇಲೆಯೆ ಸಿಮೆಂಟ್ ಕಂಬಗಳ ಹತ್ತಿರ ಅಳವಡಿಸಿದ್ದ ಮೊಬೈಲ್ ನೆಟವರ್ಕ್ ಕೇಬಲ್ ವೈರ್ ಕಿತ್ತು ಹೋಗಿದೆ.
ಬಸ್ ಸಂಚಾರ ಪ್ರಾರಂಭವಾಗದ ಕಾರಣ ನದಿಯ ಆಚೆಗಿರುವ ಗ್ರಾಮಗಳ ವಿದ್ಯಾರ್ಥಿಗಳು ಚಿತ್ತಾಪುರ ಪಟ್ಟಣದಲ್ಲಿನ ಶಾಲಾ ಕಾಲೇಜಿಗೆ ಬರಲು ತೊಂದರೆಯಾಗಿದೆ. ಚಿತ್ತಾಪುರದಿಂದ ಕಲಬುರಗಿಗೆ ಶಹಾಬಾದ್ ಮಾರ್ಗವಾಗಿ, ಸೇಡಂ ನಗರಕ್ಕೆ ಮಳಖೇಡ ಮಾರ್ಗವಾಗಿ ಬಸ್ ಸಂಚಾರ ಮುಂದುವರಿದಿದೆ.