ವಾಡಿ: ಪಟ್ಟಣದಲ್ಲಿ ಸುಮಾರು 3 ವರ್ಷಗಳಿಂದ ಸಾಗುತ್ತಿದ್ದ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳಿಸದೆ ಸಾರ್ವಜನಿಕರಿಗೆ ತೊಂದರೆ ಕೊಡುವದರಲ್ಲಿ ಇಲ್ಲಿನ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಅನುಷ್ಠಾನ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಲ್ ಎತ್ತುವ ಸಲುವಾಗಿ ಕಾಮಗಾರಿಯ ವೆಚ್ಚದ ಬೋರ್ಡ್ ಹಾಕಿ, ಸುಮಾರ 40 ವಿದ್ಯುತ್ ದ್ವೀಪದ ಕಂಬಗಳನ್ನು ಬೇಕಾಬಿಟ್ಟಿಯಾಗಿ ಅಳವಡಿಸಿದ್ದರು. ಮೊನ್ನೆ ಗಾಳಿಗೆ ರಸ್ತೆ ಮಧ್ಯ ಚೆಲ್ಲಾಪಿಲ್ಲಿಯಾಗಿ ಬಿದ್ದಾಗ ಮತ್ತು ಈ ಕಳಪೆ ಕಾಮಗಾರಿ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದಾಗ ವೀಕ್ಷಣೆಗೆ ಬಂದಿದ್ದ ಲೋಕೋಪಯೋಗಿ ಇಲಾಖೆಯ ಸೇಡಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಡಿ.ಎಲ್ ಗಾಜರೆ ಈ ದ್ವಿಪಥ ವಿದ್ಯುತ್ ದೀಪಗಳ ಕಂಬಗಳಿಗೆ ರಾಮನವಮಿ ಉತ್ಸವಕ್ಕಾಗಿ ಅಲಂಕರಿಸಿದ ಬಟ್ಟೆಗಳಿಂದ ಕೆಳಗೆ ಬಿದ್ದಿವೆ ಎಂದು ಕಾಮಗಾರಿ ಬಗ್ಗೆ ಸ್ವಲ್ಪವೂ ಕೂಡಾ ಅರಿವಿಲ್ಲದೆ ಬೇಜವಬ್ದಾರಿ ಹೇಳಿಕೆ ನೀಡಿ ಹೋಗಿದ್ದಾರೆ. ಕರ್ತವ್ಯದ ಜ್ಞಾನವಿಲ್ಲದ ಇಂತಹ ಅಧಿಕಾರಿಗಳು ಇರುವುದರಿಂದಲೇ ಈ ರೀತಿ ಸಾರ್ವಜನಿಕರ ಹಣ, ಸಾರ್ವಜನಿಕರ ನೆಮ್ಮದಿ ಹಾಳಾಗುತ್ತಿರುತ್ತದೆ.
ಕಾಮಗಾರಿ ಸರಿಯಾಗಿದಿದ್ದರೆ ಯಾಕೆ ಎಲ್ಲಾ ಕಂಬಗಳನ್ನು ತೆಗೆದು, ಮತ್ತೆ ಆಳವಾಗಿ ಗುಂಡಿ ತೋಡುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಅದಕ್ಕಾಗಿ ಈ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಅನುಷ್ಠಾನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನಿನ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಒತ್ತಾಯಿಸಿದ್ದೆವೆ.
ಇಂತಹ ಬೇಜವಬ್ದಾರಿ ಅಧಿಕಾರಿಗಳಿಂದ,
ಗುತ್ತಿಗೆದಾರರಿಂದ ಎಂತಹ ಕಾಮಗಾರಿ ನಿರೀಕ್ಷಿಸಲು ಸಾಧ್ಯ,
ಜನ ರೊಚ್ಚಿಗೆದ್ದು ರಸ್ತೆಗಿಳಿಯುವ ಮುಂಚೆ ಸಂಬಂಧಿಸಿದವರು ಎಚ್ಚೆತ್ತುಕೊಂಡರೆ ಕಾಮಗಾರಿ ವೆಚ್ಚದ ಅಂದಾಜಿನೊಂದಿಗೆ, ಗುಣಮಟ್ಟದ ರಸ್ತೆ ಹಾಗೂ ದ್ವಿಪಥ ವಿದ್ಯುತ್ ದೀಪಗಳ ಕಂಬಗಳನ್ನು ಅಳವಡಿಸಿಲು ಬದ್ದವಾಗಲಿ ಎಂದು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.