ಜಪಾನ್ ಆಯ್ತು, ಈಗ ನೇಪಾಳದಿಂದಲೂ ಭಾರತದ ಮಾವಿನ ಹಣ್ಣಿಗೆ ನಿರ್ಬಂಧ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಠ್ಮಂಡು
ಭಾರತದಿಂದ ಆಮದು ಮಾಡಿಕೊಳ್ಳುವ ಮಾವಿನ ಹಣ್ಣಿನ ಮೇಲೆ ನೇಪಾಳ ತಾತ್ಕಾಲಿಕ ನಿರ್ಬಂಧ ಹೇರಿದೆ. ಮಾವಿನ ಹಣ್ಣಿನಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನೇಪಾಳದ ಕ್ವಾರಂಟೈನ್ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಕೆಲವು ಮಾವಿನ ಹಣ್ಣಿನ ಸಾಗಣೆಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಕೀಟನಾಶಕ ಅಂಶಗಳು ಕಂಡುಬಂದಿವೆ.

ಗ್ರಾಹಕರ ಆರೋಗ್ಯ ರಕ್ಷಣೆ ಮತ್ತು ಆಹಾರ ಸುರಕ್ಷತಾ ನಿಯಮಗಳ ಪಾಲನೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ. ಈ ಕ್ರಮವು ಕೇವಲ ಆಹಾರ ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದ್ದು, ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವುದೆ ಪರಿಣಾಮ ಬೀರುವ ಉದ್ದೇಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು ಜಪಾನ್ ಕೂಡ ಭಾರತೀಯ ಮಾವಿನ ಹಣ್ಣಿನ ಆಮದನ್ನು ಸ್ಥಗಿತಗೊಳಿಸಿತ್ತು. ಆದರೆ ಜಪಾನ್‌ನ ನಿರ್ಧಾರ ಕೀಟನಾಶಕ ಅಂಶಗಳಿಗೆ ಸಂಬಂಧಿಸಿರಲಿಲ್ಲ. ಜಪಾನ್ ಅಧಿಕಾರಿಗಳು ಭಾರತದಲ್ಲಿನ ಕೆಲವು ಸಂಸ್ಕರಣಾ ಕೇಂದ್ರಗಳಲ್ಲಿ ಕೀಟ ನಿಯಂತ್ರಣ ಕ್ರಮಗಳಲ್ಲಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಬಂಧ ಹೇರಿದ್ದರು.

ಈ ನಿರ್ಬಂಧದಿಂದ ಅಲ್ಫೋನ್ಸೋ, ಕೇಸರ್, ಲಂಗ್ರಾ ಮತ್ತು ಬಂಗನಪಲ್ಲಿ ಸೇರಿದಂತೆ ಹಲವು ಜನಪ್ರಿಯ ಭಾರತೀಯ ತಳಿಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

ಇದೀಗ ನೇಪಾಳದ ನಿರ್ಬಂಧದಿಂದ ಭಾರತೀಯ ಹಣ್ಣು ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಾಗಿದೆ. ಬೇಸಿಗೆ ಅವಧಿಯಲ್ಲಿ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪೂರೈಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *