ಸುದ್ದಿ ಸಂಗ್ರಹ ಶಹಾಬಾದ್
ಇಂಗಳಗಿ ಅಂಗನವಾಡಿ ಕಾರ್ಯಕರ್ತೆ ಶೇಖಮ್ಮ ಕುರಿ ಕರ್ತವ್ಯಕ್ಕೆ ಹಾಜರಾಗದೆ ಸತತ ಗೈರು ಇದ್ದು, ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ನಗರದ ಸಿಡಿಪಿಒ ಕಚೇರಿ ಎದುರು ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇಂಗಳಗಿ ಗ್ರಾಮದ ಅಂಗನವಾಡಿ ಕೇಂದ್ರ-1ರ ಕಾರ್ಯಕರ್ತೆ ಶೇಖಮ್ಮ ಕುರಿ ಕೇಂದ್ರಕ್ಕೆ ಹೋಗುವುದಿಲ್ಲ. ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರ ವಿತರಣೆ ಮಾಡುವುದಿಲ್ಲ. ಕಳೆದ 15 ವರ್ಷಗಳಿಂದ ರಾಜಕೀಯ ಪ್ರಭಾವ ಬೀರಿ, ಅಂಗನವಾಡಿ ಕೇಂದ್ರದ ಕೆಲಸ ಮಾಡದೆ ಅಕ್ರಮವಾಗಿ ವೇತನ ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.
ಸಮಿತಿ ಅಧ್ಯಕ್ಷ ಗೌಸ್ ದುದನಿ, ಕಾರ್ಯದರ್ಶಿ ಕಾಶಿನಾಥ ಚನ್ನಗುಂಡ, ಉಪಾಧ್ಯಕ್ಷ ಚಂದ್ರಕಾಂತ ಹೂಗಾರ, ಸಾಯಬಣ್ಣಾ ಗುಡುಬಾ, ಶರಣು ರಾವೂರ, ಶಿವಕುಮಾರ ತೆಳಗೆರಿ, ಶ್ರೀಕಾಂತ ತೆಳಗೆರಿ, ಅಶೋಕ ರಾಠೋಡ, ಮಂಜುನಾಥ ಕರದಳ್ಳಿ, ಶಿಲ್ಪಾ ತೆಳಗೆರಿ, ರಿಜವಾನ್, ಖದೀರ್ ಪಾಷಾ, ಸುನಿತಾ ರಾಠೋಡ, ಗೀತಾ, ಶಾಂತಕುಮಾರ ಗುಡುಬಾ, ಆನಂದ ಪೂಜಾರಿ ಭಾಗವಹಿಸಿದ್ದರು.
ತಹಸೀಲ್ದಾರ್ ನೀಲಪ್ರಭಾ ಬಬಲಾದ ಮನವಿ ಸ್ವೀಕರಿಸಿದರು. ಸಿಡಿಪಿಒ ಶಿವಶರಣಪ್ಪ ಬುಶೆಟ್ಟಿ, ಹಿರಿಯ ಮೇಲ್ವಿಚಾರಕಿ ಮೀನಾಕ್ಷಿ ಗುಂಡುಗುರ್ತಿ ಹಾಜರಿದ್ದರು.