ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಘಟಕದ ವತಿಯಿಂದ ಶಾಲೆಗೊಂದು ಜಾನಪದ ಕಲರವ ಕಾರ್ಯಕ್ರಮ ಜರಗಿತು.
ಗ್ರಾಮದ ಮುಖಂಡ ಶಿವಲಿಂಗಯ್ಯ ಸ್ವಾಮಿ ಮಠಪತಿ ಅವರು ಡ್ರಮ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜನಪದ ಕಲಾವಿದರಾದ ಭೀಮರಾಯ, ಮಲ್ಲಪ್ಪ ನಂಜೋಳಿ, ಸಂಗೀತ ಕಲಾವಿದೆ, ಶ್ರೀದೇವಿ ಹಿರೆಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭೀಮರಾಯ ಅವರು ಮೊಹರಂ ಪದ, ಮಲ್ಲಪ್ಪ ನಂಜೋಳಿ ಅವರು ಭಜನೆ ಪದ, ಶ್ರೀದೇವಿ ಹಿರೆಗೌಡ ಅವರು ಜನಪದ ಗೀತೆ ಹಾಡುವ ಮೂಲಕ ಜಾನಪದ ಕಲೆಯನ್ನು ಪ್ರದರ್ಶನ ಮಾಡಿ ವಿದ್ಯಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಅವರು ಉಪನ್ಯಾಸ ನೀಡಿ, ಜನಪದದ ವಿವಿಧ ಪದಗಳನ್ನು ಹಾಡಿ ವಿದ್ಯಾರ್ಥಿಗಳ ಮನಸ್ಸನ್ನು ಸೆರೆ ಹಿಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಗುರು ಪಂಡಿತ ನೆಲೋಗಿ ಮಾತನಾಡಿ, ಕೃಷಿ ಮೂಲದಿಂದ ಬಂದ ಜನಪದ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಬೇಕು, ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವದು ಸರ್ವ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಪ್ರಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಇಂಗಳಗಿ ವಲಯ ಅಧ್ಯಕ್ಷ ಶಂಭುಲಿಂಗ ವಿಶ್ವಕರ್ಮ, ಶಿಕ್ಷಕರಾದ ನರಸಪ್ಪ ಜಾಣ, ಮೈನುದ್ದಿನ್, ಲೋಕೇಶ್ ಇದ್ದರು
ಕಾರ್ಯಕ್ರಮವನ್ನು ಶಿಕ್ಷಕ ಜಬ್ಬರ್’ಮಿಯಾ ಜಮಾದಾರ್ ಸ್ವಾಗತಿಸಿದರು, ಶರಣಪ್ಪ ಕಟ್ಟಿ ನಿರೂಪಿಸಿದರು. ಆರತಿ ಹಿರೆಮಠ ವಂದಿಸಿದರು.