ಕಲಬುರಗಿ: ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ ಎಂಬ ಮಾತು ಚಿತ್ರಕಲೆಯ ಮಹತ್ವ ಸಾರುತ್ತದೆ. ಚಿತ್ರಕಲೆಯು ಸಂಸ್ಕೃತಿ, ಪರಂಪರೆ, ಇತಿಹಾಸದ ಕುರುಹು ಒದಗಿಸುತ್ತವೆ ಎಂದು ಅಂತಾರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಡಾ.ಸುಬ್ಬಯ್ಯ ಎಂ.ನೀಲಾ ಅಭಿಪ್ರಾಯಪಟ್ಟರು.
ನಗರದ ಮಹಾಲಕ್ಷ್ಮಿ ನಗರದಲಳ ನೀಲಾ ಆರ್ಟ್ ಗ್ಯಾಲರಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ‘ಸ್ವತಂತ್ರ ಚಿತ್ರ ಕಲಾವಿದರ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಚಿತ್ರಕಲೆಯು ಘಟನೆ ಸಂದರ್ಭದ ನೈಜತೆಯನ್ನು ಕಟ್ಟಿಗೆ ಕಟ್ಟುವ ಹಾಗೆ ನೀಡುತ್ತದೆ. ಇದು ಶಾಶ್ವತವಾದ ದಾಖಲೆಯಾಗಿದೆ ಎಂದರು.
ಚಿತ್ರ ಕಲಾವಿದರಲ್ಲಿರುವ ಕಲ್ಪನಾ ಶಕ್ತಿ ಅದ್ಭುತವಾಗಿದೆ. ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಸಂಬಂಧಗಳ ಹುಡುಕಾಟ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕಲೆಯೆಂಬುದು ಜೀವಂತಿಕೆಯನ್ನು ಒದಗಿಸಿಕೊಡುತ್ತದೆ. ಕಲೆಯು ಮುಂದಿನ ಪೀಳಿಗೆಯಲ್ಲಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಜಾತಿ, ಧರ್ಮ, ವ್ಯಾಪ್ತಿ, ಪ್ರದೇಶಗಳನ್ನು ಮೀರಿದ್ದಾಗಿದ್ದು, ಮೌನ ಭಾಷೆಯಾಗಿದೆ. ಕಲೆ, ಕಲಾವಿದರನ್ನು ಗುರ್ತಿಸಿ, ಪ್ರೋತ್ಸಾಹಿಸುವ ಕಾರ್ಯ ಜರುಗಬೇಕು. ದೃಶ್ಯಕಲೆಯು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮವಾಗಿದ್ದು, ಸಮಾಜದಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ, ಅವುಗಳಿಗೆ ಪರಿಹಾರವನ್ನು ಸೂಚಿಸಿ ಸಮಾಜದ ಸಮತೋಲನ ಸ್ಥಿತಿಯನ್ನು ಕಾಪಾಡುವ ಶಕ್ತಿಯಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸದಸ್ಯರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಸಿದ್ದಾರೂಡ ಬಿರಾದಾರ, ಅಮರನಾಥ ಶಿವಮೂರ್ತಿ ಸೇರಿದಂತೆ ಅನೇಕರು ಇದ್ದರು.