ಸುದ್ದಿ ಸಂಗ್ರಹ ಕಲಬುರಗಿ
ಹಲ್ಲೆ ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ರಾಜಿ ಅರ್ಜಿ ದಾಖಲಿಸಲು ಲಂಚ ಪಡೆದ ಸಹಾಯಕ ಸರ್ಕಾರಿ ಅಭಿಯೋಜಕರೊಬ್ಬರು (ಎಪಿಪಿ) ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ರಾಜಿ ಅರ್ಜಿ ಸಲ್ಲಿಕೆಗೆ ಹೈದರಾಬಾದ್ ಮೂಲದ ಬಟ್ಟೆ ವ್ಯಾಪಾರಿ ರಾಹುಲ್ ಮಾರಾಜೋ ಮುಂದಾಗಿದ್ದರು. ಅದಕ್ಕೆ 10 ಸಾವಿರ ನಗದು, 9 ಸೀರೆಗಳು, 4 ಶರ್ಟ್ಗಳು, 4 ಲಂಡನ್ ಜೀನ್ಸ್ ಪ್ಯಾಂಟ್, ಒಂದು ಜೊತೆ ಶೂ, ಮಹಿಳೆಯರ ನಾಲ್ಕು ಉಡುಗೆಗಳು, ಮಹಿಳೆಯರ 6 ಜೋಡಿ ಚಪ್ಪಲಿಗಳಿಗೆ ಎಪಿಪಿ ಲೋಖಂಡೆ ಬೇಡಿಕೆ ಇಟ್ಟಿದ್ದರು. ಈ ಕುರಿತು ರಾಹುಲ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಸಂತೋಷಕುಮಾರ 10 ಸಾವಿರ ನಗದು ಹಾಗೂ ಬಟ್ಟೆಗಳನ್ನು ಲಂಚವಾಗಿ ಪಡೆಯುವಾಗ ಲೋಕಾಯುಕ್ತ ಎಸ್ಪಿ ಸಿ.ಸಿದ್ಧರಾಜು ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ನೇತೃತ್ವದ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.
2025ರ ಡಿಸೆಂಬರ್ 30ರಂದು ಕಕ್ಷಿದಾರರೊಬ್ಬರ ಪರವಾಗಿ ಉತ್ತಮ ವಾದ ಮಂಡಿಸಲು 50 ಸಾವಿರಕ್ಕೆ ಬೇಡಿಕೆ ಇಟ್ಟು, 25 ಸಾವಿರ ಲಂಚ ಪಡೆಯುತ್ತಿದ್ದಾಗ ಕಲಬುರಗಿಯ ಎರಡನೇ ಪಿಡಿಜೆ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ. ಲೋಕಾಯುಕ್ತ ಬಲೆಗೆ ಬಿದ್ದಿದ್ದರು.