ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಗಂಗಾ ಪರಮೇಶ್ವರಿ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಬಿಎಡ್ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ವಿಶೇಷ “ಯೋಗಾ ಕಾರ್ಯಗಾರ”ದಲ್ಲಿ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಸಸಿಗೆ ನಿರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಯೋಗಾಭ್ಯಾಸ ಮಾಡಿಸಿ ಮಾತನಾಡಿದ ಅವರು, ಯೋಗದಿಂದ ಆರೋಗ್ಯ, ಐಶ್ವರ್ಯ, ನೆಮ್ಮದಿ, ಆನಂದ ಪಡೆಯಬಹುದಾಗಿದೆ. ದಿನನಿತ್ಯ ನಾವು ಯೋಗಾಭ್ಯಾಸ ಮಾಡುವ ಮೂಲಕ ಮಾನಸಿಕ ನೆಮ್ಮದಿ ಜೊತೆಗೆ ಓದಿನಲ್ಲಿ ಉನ್ನತ ಮಟ್ಟ ಹೆಚ್ಚಿಸಿಕೊಳ್ಳಬಹುದು ಎಂದರು.
ಇಂದಿನ ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಯೋಗ ಅತ್ಯಗತ್ಯ, ಏಕೆಂದರೆ ಇದು ಏಕಾಗ್ರತೆ, ಸ್ಮರಣೆ ಮತ್ತು ಶೈಕ್ಷಣಿಕ ಸಾಧನೆಯನ್ನು ಸುಧಾರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸ್ಪಷ್ಟತೆ ನೀಡುತ್ತದೆ. ದೈಹಿಕವಾಗಿ ಶಕ್ತಿ, ನಮ್ಯತೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಭಾವನಾತ್ಮಕ ನಿಯಂತ್ರಣ ಮತ್ತು ಸ್ವಯಂ-ಶಿಸ್ತನ್ನು ಬೆಳೆಸಲು ಸಹಾಯ ಮಾಡುತ್ತದೆ. ಆಧುನಿಕ ಒತ್ತಡದ ಜೀವನದಲ್ಲಿ ಆರೋಗ್ಯಕರ ಮತ್ತು ಸಮತೋಲಿತ ವ್ಯಕ್ತಿತ್ವ ವಿಕಸನಕ್ಕೆ ಯೋಗವು ಒಂದು ದಿವ್ಯ ಔಷಧಿ ಎಂದರು.

ವಿದ್ಯಾರ್ಥಿಗಳು ತಮ್ಮ ದಿನಚರಿಯಲ್ಲಿ ಆರೋಗ್ಯ ಸೂತ್ರಗಳನ್ನು ಯಾವರೀತಿ ಅಳವಡಿಕೊಂಡು ಯಶಸ್ಸು ಪಡೆಯಬೇಕು ಎಂದು ವಿವರಿಸಿದರು.
ಈ ಸಂಧರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಜಶೇಖರ ಜಿ.ಆರ್, ಪ್ರಾಧ್ಯಾಪಕರಾದ ಮುರಳಿಧರ ಪಾಟೀಲ, ಶ್ರೀಧರ ರೆಡ್ಡಿ, ಗೋಪಾಲ ಪವಾರ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಕಾಲೇಜಿನ ಸರ್ವ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.