ಕಲಬುರಗಿ: ಬಹುಪಯೋಗಿಯಾದ ಬಿದರಿನಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯ, ರೈತರು ಇದರ ಬಗ್ಗೆ ಚಿತ್ತ ಹರಿಸುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಬಿದಿರು ದಿನಾಚರಣೆ’ಯನ್ನು ಬಿದಿರಿನ ಗಿಡಗಳಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಿದಿರು ಅರಣ್ಯ ಬೆಳೆಯಾಗಿದ್ದು, ಬುಟ್ಟಿ, ಪೀಠೋಪಕರಣಗಳ ತಯಾರಿಕೆ, ಕೃಷಿ ಉಪಕರಣಗಳ ತಯಾರಿಕೆ, ಮನೆ ನಿರ್ಮಾಣಕ್ಕೆ ಸಲಕರಣೆ, ಜೊತೆಗೆ ಭವಿಷ್ಯದಲ್ಲಿ ಇದನ್ನು ಆಹಾರ, ಟಿಂಬರ್, ಇಂಧನವಾಗಿ ಉಪಯೋಗವಾಗಲಿದ್ದು, ಇದನ್ನು ‘ಹಸಿರು ಬಂಗಾರ’ ಎಂದು ಕರೆಯಲಾಗುತ್ತದೆ ಎಂದರು.
ಕಲ್ಲಿದ್ದಿಲನ ಕೊರತೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಿದಿರನ್ನು ಪರ್ಯಾಯ ಇಂಧನವನ್ನಾಗಿ ಬಳಸಬಹುದಾಗಿದೆ. ಬಿದಿರಿನ ಎಲೆಗಳು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿವೆ. ಅರಣ್ಯ ವೃದ್ಧಿಯಾಗುತ್ತದೆ. ಉಷ್ಣಾಂಶ ನಿಯಂತ್ರಿಸುತ್ತದೆ. ಬಿದಿರು ಸಸಿಗಳನ್ನು ನೆಟ್ಟು, ಪೋಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಶಿಲ್ಪಾ, ಪೂರ್ಣಿಮಾ, ಕಾಶಮ್ಮ, ಪ್ರಿಯಾಂಕಾ, ಪ್ರೀತಿ, ಸರಸ್ವತಿ, ಭಾಗ್ಯಶ್ರೀ, ಸೇವಕಿಯರಾದ ಸುನಿತಾ, ನಾಗಮ್ಮ ಮತ್ತು ವಿದ್ಯಾರ್ಥಿಗಳು ಇದ್ದರು.