ಚಿತ್ತಾಪುರ: ಕೋಲಿ ಸಮಾಜದ ಗುರು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಬಗ್ಗೆ ನಾಯಕ ಸಮುದಾಯದವರು ಅವಹೇಳನಕಾರಿ ಮಾತನಾಡಿರುವುದು ತಾಲೂಕು ಕೋಲಿ ಸಮಾಜ ಖಂಡಿಸುತ್ತದೆ ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಮತ್ತು ಗೌರವಾಧ್ಯಕ್ಷ ರಾಮಲಿಂಗ ಬಾನರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೌಡಯ್ಯನವರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಗ್ಗೆ ದಾಖಲಾಗಿರುವ ಪ್ರಕರಣದಡಿ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕೋಲಿ ಸಮಾಜ ಒತ್ತಾಯಿಸುತ್ತದೆ ಎಂದರು.
ಈ ಘಟನೆಯನ್ನು ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯಾದಗಿರಿಯಲ್ಲಿ ಸೆ.1 ರಂದು ಕೋಲಿ ಕಬ್ಬಲಿಗ, ತಳವಾರ ಸಮಾಜದಿಂದ ನಡೆಯುತ್ತಿರು ಯಾದಗಿರಿ ಚಲೊ ಐತಿಹಾಸಿಕ ಪ್ರತಿಭಟನೆಗೆ ಚಿತ್ತಾಪುರ ತಾಲೂಕಿನ ಕೋಲಿ ಸಮಾಜವು ಬೆಂಬಲಿಸುತ್ತದೆ ಎಂದರು.
ಪ್ರತಿಭಟನೆಗೆ ಬೆಂಬಲಿಸಿ ಸಮಾಜದ ಪದಾಧಿಕಾರಿಗಳು, ಮುಖಂಡರು, ಯುವಕರು ಭಾಗವಹಿಸುತ್ತಿದ್ದು ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯಾದಗಿರಿ ಚಲೊ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನ ಶಕ್ತಿ ತೋರಿಸಬೇಕಿದೆ. ಪ್ರತಿಭಟನೆ ಯಶಸ್ವಿಗೆ ಸಮಾಜದ ಜನರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕೋಲಿ ಸಮಾಜ ಪ್ರಧಾನ ಕಾರ್ಯದರ್ಶಿ ಕರಣಕುಮಾರ, ನಗರ ಗೌರವಾದ್ಯಕ್ಷ ಭೀಮಣ್ಣಾ ಹೋತಿನಮಡಿ, ನಗರ ಅಧ್ಯಕ್ಷ ಪ್ರಭು ಹಲಕರ್ಟಿ, ತಾಲೂಕು ಯುವ ಕೋಲಿ ಸಮಾಜ ಅಧ್ಯಕ್ಷ ರಾಜೇಶ ಹೋಳಿಕಟ್ಟಿ, ನಗರ ಯುವ ಕೋಲಿ ಸಮಾಜ ಅಧ್ಯಕ್ಷ ಬಸವರಾಜ ಮೈನಾಳಕರ ಸೇರಿದಂತೆ ಅನೇಕರು ಇದ್ದರು.