ಚಿತ್ತಾಪುರ: ತಾಲೂಕಿನ ಶೇ 68ರಷ್ಟು ರೈತರು ಮಾತ್ರ ಪಹಣಿಗೆ ಆಧಾರ್ ಜೋಡಣೆ ಮಾಡಿದ್ದಾರೆ. ಸರ್ಕಾರದ ವಿವಿಧ ಸೌಲಭ್ಯಕ್ಕಾಗಿ ಉಳಿದವರು ಆಧಾರ್ ಜೋಡಣೆ ಮಾಡಬೇಕು ಎಂದು ತಹಸೀಲ್ದಾರ್ ಅಮರೇಶ ಬಿರಾದಾರ ತಿಳಿಸಿದ್ದಾರೆ.
ಆಧಾರ್ ಜೋಡಣೆಯಿಂದ ಪೌತಿ, ವಾರಸಾ ಖಾತೆಯ ವರ್ಗಾವಣೆಯಲ್ಲಿ ಆಗುವ ಅಕ್ರಮವನ್ನು ತಡೆಗಟ್ಟಬಹುದು. ಉಪ ನೋಂದಣಿ ಕಚೇರಿಯಲ್ಲಿ ತಮ್ಮ ಬದಲಿಗೆ ಬೇರೆಯವರು ಮೊಟ್ಟೆ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸುವದು ತಡೆಗಟ್ಟಬಹುದು. ಬ್ಯಾಂಕ್ ಮತ್ತು ಸರ್ಕಾರದ ಇತರೆ ಸೌಲಭ್ಯದ ವಿಳಂಬಕ್ಕೆ ಅವಕಾಶವಿರುವುದಿಲ್ಲ ಎಂದಿದ್ದಾರೆ.
ಸರ್ಕಾರದ ಅಧಿಸೂಚನೆ ಪ್ರಕಾರ ಒಂದು ಕುಟುಂಬಕ್ಕೆ ಭೂ ಹಿಡುವಳಿ ಪರಿಮಿತಿ 64 ಎಕರೆ ಕೃಷಿ ಜಮೀನು ಬದಲಾಗಿ105 ಎಕರೆವರೆಗೆ ಕೃಷಿ ಜಮೀನು ಹೊಂದಬಹುದು. ದೊಡ್ಡ ರೈತರು ಅತಂಕ ಪಡುವ ಅಗತ್ಯವಿಲ್ಲ, ಮುಂದಿನ ದಿನಗಳಲ್ಲಿ ಉಪ ನೋಂದಣಿ ಕಚೇರಿ ಮತ್ತು ಕಂದಾಯ ಇಲಾಖೆ ಕಚೇರಿಯ ತಂತ್ರಾಂಶವು ವಿಲೀನ ಮಾಡಲಾಗುತ್ತಿದೆ. ಇದರಿಂದ ನೊಂದಣಿ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಯಿಂದ ಬೆಳೆ ನಷ್ಟ ಪರಿಹಾರ, ಬರಗಾಲ ಪರಿಹಾರ, ರೈತರ ಅತ್ಮಹತ್ಯೆ ಪರಿಹಾರ, ಹಾವು ಕಚ್ಚಿ ಮೃತಪಟ್ಟ ಪ್ರಕರಣಗಳಲ್ಲಿ ಪರಿಹಾರ ಮೊತ್ತ ನಿಯಮಾನುಸಾರ ಪಾವತಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.