ಕಲಬುರಗಿ: ಬಾಲ್ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರ್ಯದ ಅಪ್ರತಿಮ ಸ್ವಾತಂತ್ರ ಹೋರಾಟಗಾರರಾಗಿದ್ದಾರೆ. ತಿಲಕ್ರು ಸ್ವರಾಜ್ಯದ ಪ್ರಮುಖ ಪ್ರತಿಪಾದಕರು. ಆಜಾದ್ರು ಕ್ರಾಂತಿಕಾರಕ ಸ್ವಾತಂತ್ರ ಹೋರಾಟಗಾರರು. ಇರ್ವ ಮಹನೀಯರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಬಾಲ್ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್’ರ ಜನುಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ತಿಲಕ್ ಅವರು ಕೇಸರಿ ಮತ್ತು ಮರಾಠಾ ಎಂಬ ಪತ್ರಿಕೆಗಳು ಪ್ರಾರಂಭಿಸಿದರು. ಗಣೇಶ ಚತುರ್ಥಿ ಮತ್ತು ಶಿವಾಜಿ ಉತ್ಸವಗಳನ್ನು ಸಾರ್ವಜನಕಿವಾಗಿ ಆಚರಿಸುವ ಮೂಲಕ ದೇಶದ ನಾಗರಿಕರಲ್ಲಿ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸಿದರು. “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಮತ್ತು ನಾನು ಅದನ್ನು ಪಡೆಯಲೇಬೇಕು.” ಎಂದು ಸಾರಿ, ದೇಶದ ಸ್ವಾತಂತ್ರ್ಯಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರೊಬ್ಬ ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ, ಲೇಖಕ, ತತ್ವಜ್ಞಾನಿ, ಹೋರಾಟಗಾರರಾಗಿದ್ದರು ಎಂದರು.
ಆಜಾದವೇ ನನ್ನ ಗುರಿಯೆಂದು ಬಾಲ್ಯದಲ್ಲಿಯೇ ಬ್ರಿಟಿಷರ ವಿರುದ್ಧ ಗರ್ಜಿಸಿದ ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರ್ಯಕ್ಕೆ ನೀಡಿರುವ ಕೊಡುಗೆ ಅನನ್ಯ. ಸಮಾಜದಲ್ಲಿದ್ದ ತೊಡಕುಗಳನ್ನು ನಿರ್ಮಲನೆ ಮಾಡಲು ಶ್ರಮಿಸಿದರು. ಸ್ವಾತಂತ್ರ್ಯಕ್ಕಾಗಿ ವೀರಮರಣ ಹೊಂದಿದ್ದಾರೆ. ಅವರಲ್ಲಿರುವ ಅಪ್ಪಟವಾದ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಮತ್ತು ವಿದ್ಯಾರ್ಥಿಗಳು ಇದ್ದರು.