ಕಲಬುರಗಿ: ಮಕ್ಕಳನ್ನು ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿಸಿ, ಸಮಾಜದ ದೊಡ್ಡ ಆಸ್ತಿಯನ್ನಾಗಿಸುವಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ. ಮಕ್ಕಳು ತಮ್ಮ ಪಾಲಕ-ಪೋಷಕರ ಶ್ರಮ ಮರೆಯಬಾರದು. ಅವರಿಗೆ ಗೌರವಯುತವಾಗಿ ಕಾಣುವುದು ಅಗತ್ಯ. ಮಕ್ಕಳು ಪಾಲಕರನ್ನು ಎಂದಿಗೂ ವೃದ್ಧಾಶ್ರಮಕ್ಕೆ ನೂಕುವ ಪ್ರವೃತ್ತಿ ಬೆಳಿಸಿಕೊಳ್ಳಬೇಡಿ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಮಾರ್ಮಿಕವಾಗಿ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ಜಾಗತಿಕ ಪಾಲಕರ ದಿನಾಚರಣೆ’ ಉದ್ಘಾಟಿಸಿಯಲ್ಲಿ ಮಾತನಾಡಿದ ಅವರು, ತನಗಾಗಿ ಏನನ್ನು ಪ್ರಾರ್ಥಿಸದ ತಾಯಿ, ತನಗಾಗಿ ಏನನ್ನು ಮಾಡಿಕೊಳ್ಳದ ತಂದೆ, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸುವ ಮುಗ್ದ ಜೀವಿಗಳು. ಮಗುವಿಗೆ ಶಿಕ್ಷಣ, ಸಂಸ್ಕಾರ, ಬುದ್ಧಿಯನ್ನು ನೀಡಿ, ವ್ಯಕ್ತಿಯನ್ನು ಶಕ್ತಿಯನ್ನಾಗಿಸುವಲ್ಲಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾರೆ. ಮಕ್ಕಳು ಪಾಲಕರ ಮಾತು ಆಲಿಸಿ, ಮುನ್ನಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಕ್ಸಸ್ ಕಂಪ್ಯೂಟರ ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್, ಶಿಕ್ಷಕ ಮಹಾದೇವಪ್ಪ ಎಚ್.ಬಿರಾದಾರ, ಸಿದ್ದೇಶ್ವರ ಸೇರಿದಂತೆ ಅನೇಕರು ಇದ್ದರು.