ಕಲಬುರಗಿ: ನಾಟಕಗಳು ಸಮಾಜದಲ್ಲಿರುವ ಅಂಕು-ಡೊಂಕುಗಳು, ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಹಾರ ನೀಡುತ್ತವೆ ಎಂದು ಮುಖಂಡ ಶರಣಬಸಪ್ಪ ಎಚ್. ಕಾಂದೆ ಅಭಿಮತಪಟ್ಟರು.
ಆಳಂದ ತಾಲೂಕಿನ ಜಕ್ಕಮೇಶ್ವರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಜರುಗಿದ ‘ತಾಯಿಯ ಕರುಳು’ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ನಾಟಕ ಅಥವಾ ರಂಗಭೂಮಿ ನಡದಾಡುವ ವಿಶ್ವವಿದ್ಯಾಲಯವಾಗಿದೆ. ವಾಸ್ತವ ಸ್ಥಿತಿಯನ್ನು ದೊಡ್ಡದು ಅಥವಾ ಚಿಕ್ಕದಾಗಿ ಹೇಳದೆ ಇರುವುದನ್ನು, ಇರುವ ಹಾಗೆಯೇ ಹೇಳುವ ರಂಗಭೂಮಿ, ಸಮಾಜದ ನೈಜ ಪ್ರತಿಬಿಂಬವಾಗಿದೆ ಎಂದರು.
ಇಂದಿನ ಆಧುನಿಕತೆಯ ಡಿಜಿಲೀಕರಣದ ಯುಗದಲ್ಲಿ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕಲಾವಿದರು ತಮ್ಮ ಜೀವನ ಸಾಗಿಸುವುದು ಕಷ್ಟವಾಗಿ, ಮತ್ತೊಂದು ವೃತ್ತಿಗೆ ತೆರಳಬೇಕಾದ ಅನಿವಾರ್ಯತೆ ಬಂದಿದೆ. ಸರ್ಕಾರ ಕಲಾವಿದರಿಗೆ ಸೂಕ್ತ ಮಾಸಾಶನ, ಆರ್ಥಿಕ ಭದ್ರತಾ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.
ನ್ಯಾಯವಾದಿ ಅಶೋಕ ಮುಲಗೆ ಭೂಮಿಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರಜನಿಕಾಂತ ನರುಡೆ, ಅರುಣಕುಮಾರ ಬಿರಾದಾರ, ಸಂತೋಷಕುಮಾರ ಬುಜುರಕೆ, ಎಸ್.ಎಸ್.ಮಾಲಿಪಾಟೀಳ, ಶೇಖರ ಪಾಟೀಲ, ವಿಠಲ ಕಾಂದೆ, ಸಿದ್ದಾರೂಡ ಮಾಲಿಪಾಟೀಲ ಸೇರಿದಂತೆ ಗ್ರಾಮಸ್ಥರು, ಇನ್ನಿತರರು ಪಾಲ್ಗೊಂಡಿದ್ದರು.