ಬೀದರ್: ಚಿಟಗುಪ್ಪ ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ್ ಸುಭಾಷಚಂದ್ರ ಅವರನ್ನು ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಗ್ರೇಡ್-2 ತಹಸೀಲ್ದಾರ್ ಜಯಶ್ರೀ ಮತ್ತು ಅವರ ಪತಿ ಶಾರಧಕ ಸೇರಿ ಐವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಚಿಟಗುಪ್ಪ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಭಾಷಚಂದ್ರ ಹಾಗೂ ಜಯಶ್ರೀ ನಡುವೆ ಕಚೇರಿ ಕೆಲಸದಲ್ಲಿ ತಕರಾರು ನಡೆದಿದ್ದ ವಿಚಾರಕ್ಕೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.
ನಡೆದಿದ್ದು ಏನು ?
ಮೇ.16 ರಂದು ಕೆಲಸ ಮುಗಿಸಿಕೊಂಡು ಚಿಟಗುಪ್ಪದಿಂದ ಸ್ವಗ್ರಾಮ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ ಗ್ರಾಮಕ್ಕೆ ಬಸ್ನಲ್ಲಿ ತೆರಳುತ್ತಿದ್ದೆ. ಈ ವೇಳೆ ಜಯಶ್ರೀ ಅವರ ಪ್ರಚೋದನೆಯಿಂದ ಪತಿ ಶಾರಧಕ ಹಾಗೂ ಇತರ ಮೂವರು ಚಿಟಗುಪ್ಪ ತಾಲೂಕಿನ ಕುಡಂಬಲ್ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರದಲ್ಲಿ ಬಸ್ಗೆ ಕಾರು ಅಡ್ಡಹಾಕಿ ನನ್ನನ್ನು ಇಳಿಸಿಕೊಂಡು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ, ಡಾಬಾವೊಂದರ ಪಕ್ಕದಲ್ಲಿರುವ ಖಾಲಿ ಕೋಣೆಯಲ್ಲಿ ಕೂಡಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಓಡಿಹೋಗಿದ್ದಾರೆ ಎಂದು ಸುಭಾಷಚಂದ್ರ ದೂರಿದ್ದಾರೆ.