ಕಲಬುರಗಿ: ಸಮಾಜದಲ್ಲಿರುವ ಲಕ್ಷಾಂತರ ಬಡ, ಅನಾಥ ಮಕ್ಕಳಿಗೆ ಅನ್ನ,ಜ್ಞಾನ ದಾಸೋಹ, ಸಂಸ್ಕಾರ, ಮಾನವೀಯೆತೆ ನೀಡಿ, ಅವರ ಬದುಕು ಕಟ್ಟಿಕೊಟ್ಟ ಮಹಾನ ಶಿಲ್ಪಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮೀಜಿಗಳಾಗಿದ್ದಾರೆ ಎಂದು ಉಪನ್ಯಾಸಕ, ಸಮಾಜ ಸೇವಕತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ನನ ಬಸವೇಶ್ವರ ಡಿಗ್ರಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಾ.ಶಿವಕುಮಾರ ಮಾಹಾಸ್ವಾಮೀಜಿಯವರ 118ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪರಹಿತ, ಸಮಾಜ ಸೇವೆಯಲ್ಲಿಯೇ ಶಿವನ ಕಂಡು ದೈವತ್ವಕ್ಕೇರಿದ ಮಹಾನ ಚೇತನ ಅವರಾಗಿದ್ದು, ಅವರ ಸೇವೆ ಸಮಾಜಕ್ಕೆ ಸದಾ ಮಾದರಿ ಎಂದರು.
ಸಮಾಜ ಸೇವಕ, ಚಿಂತಕ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಹನ್ನೆರಡನೆ ಶತಮಾನದ ಬಸವಾದಿ ಶರಣರ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದವರು. ದಾಸೋಹ, ಕಾಯಕ ಸಂಸ್ಕೃತಿ, ಸಮಾನತೆ, ಸಾಮರಸ್ಯ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣ ಪೂಜ್ಯರದಾಗಿತ್ತು. ಸಮಾಜಕ್ಕಾಗಿ ನಿರಂತರವಾಗಿ ದಣಿವರಿಯದೆ ಸಾರ್ಥಕ ಸೇವೆಯನ್ನು ಸಲ್ಲಿಸಿ ಲಕ್ಷಾಂತರ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ನಾಗೇಶ್ ತಿಮಾಜಿ ಬೆಳಮಗಿ, ಉಪನ್ಯಾಸಕರಾದ ರಾಜೇಶ್ವರಿ ಪಾಟೀಲ, ಅನ್ನಪೂರ್ಣ ಪಸಾರ, ಪ್ರಮುಖರಾದ ಶ್ರೀಶೈಲ್ ಪೂಜಾರಿ, ಕಾರ್ತಿಕ್, ಗಾಯತ್ರಿ, ಭಾಗ್ಯಶ್ರೀ, ಅಂಬಿಕಾ ಪೂಜಾರಿ, ಮಧುಬಾಣಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.