ಕಲಬುರಗಿ: ಸಾಮಾಜಿಕ ನ್ಯಾಯದ ಹರಿಕಾರರಾದ ಬಸವಣ್ಣನವರು ಮತ್ತು ಎಲ್ಲಾ ಶರಣರ ತತ್ವ ಹಾಗೂ ಕೊಡುಗೆಯನ್ನು ದೇಶದುದ್ದಕ್ಕೂ ಪ್ರಚಾರ ಮಾಡಿ, ಎಲ್ಲರಿಗೂ ವಚನಗಳ ಸಾರವನ್ನು ಉಣಬಡಿಸುವ ಮೂಲಕ ಮಾತೆ ಮಹಾದೇವಿಯವರು ಶರಣ ತತ್ವದ ಪ್ರಸಾರಕ್ಕೆ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ಪರಮ ಪೂಜ್ಯ ಡಾ.ಮಾತೆ ಮಹಾದೇವಿ ಅವರ 79ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವಿಶ್ವದ ಮೊದಲ ಮಹಿಳಾ ಜಗದ್ಗುರುಗಳಾಗಿ ಮಹಿಳೆಯರಲ್ಲಿನ ಮೌಢ್ಯತೆ, ಕಂದಾಚಾರವನ್ನು ಹೋಗಲಾಡಿಸುವಲ್ಲಿ ಶ್ರಮಿಸಿದ್ದಾರೆ. ಎಲ್ಲೆಡೆ ಸಂಚರಿಸಿ ತಮ್ಮ ಪ್ರವಚನದ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಾರೆ. ಬಸವ ತತ್ವವನ್ನು ಗ್ರಾಮೀಣ ಪ್ರದೇಶ ಒಳಗೊಂಡಂತೆ ಪ್ರತಿಯೊಬ್ಬರ ಮನೆ-ಮನಗಳನ್ನು ಮುಟ್ಟಿಸುವಲ್ಲಿ ಮಾತಾಜೀಯವರು ಇಡೀ ತಮ್ಮ ಜೀವನ ಮುಡಪಾಗಿಟ್ಟವರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಸೋನಿಯಾ ಸರಡಗಿ ಹಾಗೂ ವಿದ್ಯಾರ್ಥಿಗಳು ಇದ್ದರು.