ಕಲಬುರಗಿ: ವಿವಿಧ ಕಾರಣಗಳಿಂದ ಕಿವಿಗಳಿಗೆ ತೊಂದರೆಯಾಗಿ ಆಲಿಸುವಿಕೆಗೆ ತೊಂದರೆಯಾಗುತ್ತದೆ. ಅದನ್ನು ಆರಂಭಿಕ ಹಂತದಲ್ಲಿ ಗುರ್ತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಕಿವಿಗಳು ಆರೋಗ್ಯವಾಗುತ್ತವೆ. ಉತ್ತಮ ಶ್ರವಣದಿಂದ ಸಮುದಾಯದೊಂದಿಗೆ ಬೆಸುಗೆ ಸಾಧ್ಯವಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಮಂಗಳವಾರ ಜರುಗಿದ ‘ವಿಶ್ವ ಶ್ರವಣ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ರಕ್ತ ಸಂಬಂಧಿ ವಿವಾಹ ಹಾಗೂ ಅನುವಂಶಿಯತೆಯು ಪ್ರಮುಖವಾಗಿ ಕಿವುಡತನಕ್ಕೆ ಕಾರಣವಾಗಿದೆ. ಶ್ರವಣದೋಷವುಳ್ಳ ವ್ಯಕ್ತಿಗೆ ಸೂಕ್ತ ಹಾಗೂ ಸಮಯೋಚಿತ ಸೇವೆಗಳನ್ನು ನೀಡಬೇಕು. ಕಿವಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಕಿವಿಯಲ್ಲಿ ನೀರು, ಕಸ ಸೇರದಂತೆ ನೋಡಿಕೊಳ್ಳಬೇಕು. ಚೂಪಾದ ವಸ್ತುಗಳು ಕಿವಿಯಲ್ಲಿ ಹಾಕಿಕೊಳ್ಳಬಾರದು. ವೈದ್ಯರು ಸೂಚಿಸಿದ ಶ್ರವಣಯಂತ್ರಗಳನ್ನು ಮಾತ್ರ ಬಳಸಬೇಕು. ಕಿವಿಗಳ ಬಗ್ಗೆ ನಿಷ್ಕಾಳಜಿ ವಹಿಸಿ ಕಿವುಡತನ ಉಂಟಾದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಶಬ್ದ ಮಾಲಿನ್ಯದಿಂದ ಕಿವಿಗಳಿಗೆ ತೊಂದರೆಯಾಗುತ್ತದೆ. 65 ಡೆಸಿಬಲ್ ಶಬ್ದ ಆಲಿಸಲು ಸಾಧ್ಯ. ಕೈಗಾರಿಕೆ, ವಾಹನಗಳು, ಧ್ವನಿವರ್ಧಕಗಳಿಂದ ಶಬ್ದ ಹೆಚ್ಚಾಗುತ್ತಿದೆ. 135 ಡೆಸಿಬಲ್ ಶಬ್ದದಿಂದ ಕಿವಿಯ ನೋವು ಹಾಗೂ ಶಾಶ್ವತ ಕಿವುಡತನ ಉಂಟಾಗುತ್ತದೆ. ಜೊತೆಗೆ ಮಾನಸಿಕ ಅಶಾಂತಿ, ಹೃದಯ ಬಡಿತ ಹೆಚ್ಚಳವಾಗಿ ಸಮಸ್ಯೆಗಳು ಉಂಟಾಗುತ್ತವೆ. ಶಬ್ದ ಮಾಲಿನ್ಯ ನಿಯಂತ್ರಣ ಅಗತ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗುರುರಾಜ ಕೈನೂರ, ಜಗನ್ನಾಥ ಗುತ್ತೇದಾರ, ನಾಗೇಶ್ವರಿ ಮುಗಳಿವಾಡಿ, ರೇಷ್ಮಾ ನಕ್ಕುಂದಿ, ಸಂಗಮ್ಮ ಅತನೂರ್, ಮಂಗಲಾ ಚಂದಾಪುರೆ, ಚಂದ್ರಕಲಾ ಮಠಪತಿ, ನಾಗಮ್ಮ ಚಿಂಚೋಳಿ, ಸಿದ್ರಾಮ, ಆಶಾ ಕಾರ್ಯಕರ್ತೆಯರು, ಬಡಾವಣೆಯ ಮಹಿಳೆಯರು, ನಾಗರಿಕರು ಸೇರಿದಂತೆ ಅನೇಕರು ಇದ್ದರು.