ಕಲಬುರಗಿ: ಯಾವುದೆ ಒಂದು ಭಾಷೆಯ ಜೀವಂತಿಗೆಗೆ, ಬೆಳವಣಿಗೆಯಾಗಲು, ಶುದ್ಧವಾಗಿ ಮಾತನಾಡಲು, ಬರೆಯಲು, ಓದಲು ವ್ಯಾಕರಣ ಅಗತ್ಯ. ಇದು ಭಾಷೆಗೆ ಅಲಂಕಾರ, ಮೆರಗು ತರುತ್ತದೆ ಎಂದು ಇಂಗ್ಲೀಷ್ ಶಿಕ್ಷಕ ದತ್ತು ಹಡಪದ ಹೇಳಿದರು.
ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ವ್ಯಾಕರಣ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ವ್ಯಾಕರಣವು ಭಾಷೆಯ ಬೆಳವಣಿಗೆಗೆ ಸಹಾಯಕವಾಗಿದೆ. ಉತ್ತಮ ಸಂವಹನ ಸಾಧ್ಯವಾಗುತ್ತದೆ. ಹೊಸ ಭಾಷೆ ಕಲಿಯಲು ಅಗತ್ಯವಾಗಿದೆ. ಪರಿಣಾಮಕಾರಿ ಸಂದೇಶ ನೀಡಲು, ಅಪಾರ್ಥ ದೂರಮಾಡಲು, ಭಾಷೆಯ ರಚನೆ ಹಾಗೂ ದಿನನಿತ್ಯದ ಬದುಕಿಗೆ ವ್ಯಾಕರಣ ಅವಶ್ಯಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ವ್ಯಾಕರಣವನ್ನು ಸರಿಯಾಗಿ ಅಧ್ಯಯನ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಶಿವಯೋಗೆಪ್ಪಾ ಎಸ್.ಬಿರಾದಾರ, ಯುವ ಸಮಾಜ ಸೇವಕ ಅಮರ ಜಿ.ಬಂಗರಗಿ, ಪ್ರಮುಖರಾದ ಸುಕೇಶ್ ಮಠ, ದಕ್ಷರಾಜ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.