ಕಲಬುರಗಿ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 40 ಲಕ್ಷ ರೂ ಮೊತ್ತದ ಗಾಂಜಾ ವಶಪಡಿಸಿಕೊಂಡು, ಸಾಗಾಟಕ್ಕೆ ಬಳಸಿದ 5 ಲಕ್ಷ ರೂ ಮೊತ್ತದ ಕಾರು ಹಾಗೂ 50 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ , ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲಿ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ ತಾಂಡಾದ ಹತ್ತಿರ ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾಳಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಲಕ್ಷ್ಮಣ ನಾಯಕ ತಾಂಡಾದ ಚಂದ್ರಕಾಂತ ಊರ್ಫ ಪಪ್ಪು ಹರಿಶ್ಚಂದ್ರ ಚವ್ಹಾಣ (40) ಮತ್ತು ಕೋಡ್ಲಿಯ ಮಲ್ಲಯ್ಯ ಮಹಾಬಳೇಶ್ವರ ಪ್ಯಾಟೀಮನಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು 18 ಪ್ಯಾಕೆಟುಗಳಲ್ಲಿ ತುಂಬಿದ 40 ಕೆ.ಜಿ ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದರು. ಈ ನಿಮಿತ್ಯ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ಪತ್ತೆ ಕುರಿತು ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಪಿ.ಎಸ್.ಐ ತಿಮ್ಮಯ್ಯ, ಕಾಳಗಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಅಂಬರೀಶ ಮಾಲಿಬಿರಾದಾರ, ಹುಸೇನ, ನಸಿರಮೀಯಾ, ಸಂಗಮೇಶ, ಬಸಪ್ಪ, ಶಿವರಾಜ, ಶ್ರೀಶೈಲ, ಮಾರುತಿ, ಮಂಜು, ಮೌನೇಶ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದರು.
.
.