ಸೇಡಂ: ಕಕ ಭಾಗದಲ್ಲಿ ಅನೇಕ ಪ್ರತಿಭಾವಂತ ಸಾಧಕರಿದ್ದಾರೆ. ಅವರನ್ನು ಗುರ್ತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ತಾ.ಪಂ ಮಾಜಿ ಸದಸ್ಯ ಮತ್ತು ಶಿಕ್ಷಣ ಪ್ರೇಮಿ ಪರ್ವತರೆಡ್ಡಿ ಪಾಟೀಲ ನಾಮವಾರ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಕೋಡ್ಲಾ ಗ್ರಾಮದ ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಳಂದ ತಾಲೂಕಿನ ಗುಂಜ ಬಬಲಾದ ಗ್ರಾಮದ ಪರೋಪಕಾರಿ, ಸಮಾಜ ಸೇವಕ ಲಿಂ.ಬಸವಂತರಾವ ಸಿ.ಪಾಟೀಲ ಅವರ ತೃತೀಯ ಲಿಂಗೈಕ್ಯ ಸ್ಮರಣೋತ್ಸವದ ಪ್ರಯುಕ್ತ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ‘ಬಸವ ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧಕರಿಗೆ ಸೇವೆ ಮಾಡಲು ಮತ್ತಷ್ಟು ಹುಮ್ಮಸ್ಸು ಬರುತ್ತದೆ. ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ ಎಂದರು.
ಭೂನ್ಯಾಯ ಮಂಡಳಿಯ ಮಾಜಿ ಸದಸ್ಯ ರವಿ ಸಾಹು ತಂಬಾಕೆ ಮಾತನಾಡಿ, ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಹೆತ್ತವರನ್ನು ಗೌರವಿಸುವ ಕೆಲಸ ಮಾಡುತ್ತಿರುವ ಸಮಾಜ ಸೇವಕ ಎಚ್.ಬಿ ಪಾಟೀಲರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದು ಬಾನಾರ ಮಾತನಾಡಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ಪ್ರಶಸ್ತಿಗಳು ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುತ್ತವೆ, ತಾಲೂಕಿನಲ್ಲಿ ಹಲವಾರು ಜನರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧಕರಿದ್ದಾರೆ ಎಂದು ನುಡಿದರು.
“ಜಾಗತಿಕ ತಲ್ಲಣಗಳಿಗೆ ಶರಣ ತತ್ವ ಪರಿಹಾರ” ಎಂಬ ವಿಷಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ, ಜಗತ್ತಿನ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಶರಣ ತತ್ವದಲ್ಲಿ ಪರಿಹಾರವಿದೆ ಎಂದು ಶರಣರ ಅನೇಕ ವಚನಗಳೊಂದಿಗೆ ಮನೋಜ್ಞವಾಗಿ ವಿವರಿಸಿದರು.
ಕೋಡ್ಲಾ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ ಮಾರುತಿ ಉದ್ಘಾಟಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ಜ್ಯೋತಿ ಸುರೇಶರೆಡ್ಡಿ ಪುರ್ಮಾ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ವಿ.ಆರಕೋಟಿ, ಗ್ರಾ.ಪಂ ಸದಸ್ಯರಾದ ಶಿವಲಿಂಗಯ್ಯಸ್ವಾಮಿ ಗಚ್ಚಿನಮಠ, ಸಂಜೀವರೆಡ್ಡಿ, ಅಮೀನರೆಡ್ಡಿ ಮದ್ನಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಪ್ರಮುಖರಾದ ಭೀಮರಾಯ ಹಣಮನಳ್ಳಿ, ಶರಣಪ್ಪರೆಡ್ಡಿ, ಶರಣರೆಡ್ಡಿ ಆರಕಟ್ಟಿ, ಗುರುನಾಥ ವಿಶ್ವಕರ್ಮ, ರಾಜು ಮಾಳಮಪನೋರ, ಮಲ್ಲು ಕಾಕಲವಾರ, ಮೊಗಲಮ್ಮ, ಶೋಭಾ, ಸುಮನ್, ಅರುಣಾ, ದೀಪಿಕಾ, ಸುಧಾರಾಣಿ, ಪೂಜಾ, ಅನ್ನಪೂರ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ವೈಷ್ಣವಿ, ಅನುಷಾ ಸಂಗಿಡಗರು ಪ್ರಾರ್ಥಿಸಿದರು. ಜ್ಯೋತಿ ಲಿಂಗಂಪಲ್ಲಿ ಗಾಯನ ನಡೆಸಿಕೊಟ್ಟರು.
ನ್ಯಾಯವಾದಿ ಸಂಜೀವರೆಡ್ಡಿ ಸ್ವಾಗತಿಸಿದರು, ಶಿಕ್ಷಕಿ ಶರಣಕಲಾ ನಿರೂಪಿಸಿದರು. ಸಿಆರ್ಪಿ ರಾಧಾಕೃಷ್ಣ ಹೆರೂರ್ ವಂದಿಸಿದರು.
ಬಸವ ಕಾಯಕ ರತ್ನ ಪ್ರಶಸ್ತ ಪುರಸ್ಕೃತರು: ವಿವಿಧ ಕ್ಷೇತ್ರದ ಸಾಧಕರಾದ ಸಾಯಿರಾಮರೆಡ್ಡಿ ವಿ ಕೋನಾಪುರ (ಕೃಷಿ), ಶಂಭುರೆಡ್ಡಿ ಮದ್ನಿ(ಶಿಕ್ಷಣ), ಸವಿತಾ ಎಸ್ ಕುಂಬಾರ (ಚಿತ್ರಕಲೆ), ನಾಗಯ್ಯ ಮಠ (ಸಮಾಜ ಸೇವೆ) ಮತ್ತು ಡಾ.ವೈ.ಬಿ.ರಮೇಶ್ (ಆರ್ಯುರ್ವೇದ ವೈದ್ಯಕೀಯ) ಅವರಿಗೆ ‘ಬಸವ ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು