ಚಿತ್ತಾಪುರ: ಮಕ್ಕಳು ಪಠ್ಯದ ಜೊತೆಗೆ ಇತಿಹಾಸದ ಅಧ್ಯಯನ ಕಡೆಗೆ ಆಸಕ್ತಿ ತೋರಬೇಕು, ಅಂದಾಗ ಮಾತ್ರ ನಮ್ಮ ಪರಂಪರೆ, ವೈಭವವನ್ನು ತಿಳಿಯಲು ಸಾಧ್ಯ ಎಂದು ಹಿರಿಯ ಸಂಶೋಧಕ ಡಿ.ಎನ್ ಅಕ್ಕಿ ಹೇಳಿದರು.
ಸಮೀಪದ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಾಧಕರೊಂದಿಗೆ ಮಾತುಕತೆ ಮತ್ತು ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನೆಲದ ಸ್ಮಾರಕಗಳನ್ನು ಸಂರಕ್ಷಣೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೇವಲ ಬೇಲೂರು ಹಳೇಬೀಡು ನಂತಹ ದಕ್ಷಿಣ ಕನಾಟಕದ ಸ್ಮಾರಕಗಳಿಗೆ ಪ್ರಾಮುಖ್ಯತೆ ನೀಡಿ ಬಿಂಬಿಸಲಾಗುತ್ತಿದೆ. ಆದರೆ ನಮ್ಮ ಭಾಗದ ಅನೇಕ ಸ್ಮಾರಕಗಳು ಇವತ್ತಿಗೂ ಎಲೆ ಮರೆ ಕಾಯಿಯಾಗಿವೆ. ಅವುಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ. ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರು ನಮ್ಮ ಭಾಗದ ಐತಿಹಾಸಿಕ ಸ್ಮಾರಕಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವುಗಳ ಪರಿಚಯ ಮಾಡಿಸಬೇಕು ಎಂದು ಸಲಹೆ ನೀಡಿದರು.
ಇತಿಹಾಸ ಸಂಶೋಧಕರಿಗೆ ಹಸಿವು, ಧೂಳು, ದಣಿವು ಸಾಮಾನ್ಯ ಅವುಗಳನ್ನು ಲೆಕ್ಕಿಸದೆ ಶಾಸನಗಳು, ನಾಣ್ಯಗಳು ಮತ್ತು ಸ್ಮಾರಕಗಳ ಬಗ್ಗೆ ಸಂಶೋಧನೆ ಮಾಡಿ ನಾಡಿಗೆ ನೀಡುತ್ತಾರೆ ಎಂದರು.
ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜ ಮಲಕಂಡಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು, ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ವೇದಿಕೆ ಮೇಲಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಹಿರಿಯ ಸಂಶೋಧಕ ಡಿ.ಎನ್ ಅಕ್ಕಿಯವರು ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರಮೇಶಭಟ್, ಚಂದ್ರಶೇಖರ ಬಳ್ಳಾ, ಪ್ರಮುಖರಾದ ಶರಣು ವಸ್ತ್ರದ್, ಮುಖ್ಯಗುರು ವಿದ್ಯಾಧರ ಖಂಡಾಳ, ಶಿಕ್ಷಕರಾದ ಶಿವಕುಮಾರ ಸರಡಗಿ, ಬಸವರಾಜ ರಾಠೋಡ, ಮಂಜುಳಾ ಪಾಟೀಲ ಮತ್ತು ದತ್ತು ಗುತ್ತೇದಾರ್ ಇದ್ದರು.
ಶಿಕ್ಷಕಿ ಭುವನೇಶ್ವರಿ ಎಂ ನಿರೂಪಿಸಿದರು, ಕು. ರಶ್ಮಿಕಾ ಪ್ರಾರ್ಥಿಸಿದರು, ಸಿದ್ದಲಿಂಗ ಬಾಳಿ ಸ್ವಾಗತಿಸಿದರು.