ಚಿತ್ತಾಪುರ: ಕೋಲಿ ಸಮಾಜದ ತಾಲೂಕು ಘಟಕ ಹಾಗೂ ನಗರ ಘಟಕದ ನೂತನ ಅದ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ತಾಲೂಕು ಘಟಕ ಹಾಗೂ ನಗರ ಘಟಕದ ಅದ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಯಾರು ಸಮರ್ಥರು ಎಂಬುದರ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಲಾಗುತ್ತದೆ. ಸಮಾಜದ ಸಂಘಟನೆಯಲ್ಲಿ ಸಕ್ರೀಯವಾಗಿರುವವರನ್ನು ಪರಾಮರ್ಶೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ವ್ಯಕ್ತಿಗಿಂತ ಸಮಾಜ ದೊಡ್ಡದು, ಸಮಾಜಕ್ಕಿಂತ ಯಾರು ದೊಡ್ಡವರಿಲ್ಲ. ಅದ್ಯಕ್ಷರ ಆಯ್ಕೆ ವಿಷಯದಲ್ಲಿ ಯಾರೂ ಒತ್ತಡ ತರುವುದು, ವಿರೋಧ ವ್ಯಕ್ತ ಪಡಿಸುವುದು ಮಾಡಬಾರದು. ಸಮಾಜ ಸಂಘಟನೆ ಹಾಗೂ ಒಗ್ಗಟ್ಟು ಮುಖ್ಯ. ಸಮಾಜಕ್ಕಿಂತ ತಮ್ಮ ಹಿತಾಸಕ್ತಿಯೇ ಮುಖ್ಯವೆಂದು ನಡೆದುಕೊಂಡು ಅಸಹಕಾರ ಮನೋಭಾವನೆಯಿಂದ ನಡೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಸೇವಾ ಮನೋಭಾವನೆಯಿಂದ ಸಮಾಜ ಸಂಘಟನೆ ಬಲಗೊಳ್ಳುತ್ತದೆ. ಸಾಮಾಜಿಕ ಕಳಕಳಿ, ಸಮಾಜದ ಹಿತಾಸಕ್ತಿ ಮುಖ್ಯ ಹೊರತು ಯಾರದೇ ಸ್ವಯಂ ಸ್ಥಾನಮಾನ ಮುಖ್ಯವಲ್ಲ. ಆಕಾಂಕ್ಷಿಗಳು ಗುಂಪುಗಾರಿಕೆ ಮಾಡುವ ಮೂಲಕ ಸಮಾಜ ಸಂಘಟನೆಗೆ ಧಕ್ಕೆ ತರಬಾರದು. ಸಮಾಜದ ಮುಖಂಡರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದರು.
ತಾಲೂಕು ಘಟಕ ಮತ್ತು ನಗರ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ನೂತನ ಅಧ್ಯಕ್ಷರ ನೇತೃತ್ವದಲ್ಲಿ ತಾಲೂಕು ಯುವ ಘಟಕ, ನಗರ ಯುವ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಸಮಾಜದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಭೆಯಲ್ಲಿ ಭಾಗವಹಿಸುವ ಮೂಲಕ ಸಮಾಜದ ಸಂಘಟನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಕೋಲಿ ಸಮಾಜದ ಮಾಜಿ ಅದ್ಯಕ್ಷ ರಾಮಲಿಂಗ ಬಾನರ್, ಮಾಜಿ ಗೌರವಾದ್ಯಕ್ಷ ಹಣಮಂತ ಸಂಕನೂರ ಸೇರಿದಂತೆ ಅನೇಕರು ಇದ್ದರು.