ಕಲಬುರಗಿ: ಪಂಪ್ ಆಪರೇಟರ್ ಒಬ್ಬರ ಬಾಕಿ ವೇತನ ಪಾವತಿ ಹಾಗೂ ಮರು ನೇಮಕ ಮಾಡಿಕೊಳ್ಳಲು 17 ಸಾವಿರ ರೂ ಲಂಚದ ಹಣ ಪಡೆಯುತ್ತಿದ್ದ ಆರೋಪದಡಿ ಪಿಡಿಒ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. .
ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್ ಲಂಚ ಪಡೆದ ಆರೋಪಿ . ಪಂಪ್ ಆಪರೇಟರ್ ಗುರುಸಿದ್ದಯ್ಯ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ .
ಗುರುಸಿದ್ದಯ್ಯ ಅವರ ಆರು ತಿಂಗಳ ವೇತನ ಬಾಕಿ ಉಳಿದಿತ್ತು . ಬಾಕಿ ಹಣ ಮಂಜೂರು ಮಾಡಿ , ಮರು ನೇಮಕ ಮಾಡಿಕೊಳ್ಳಲು 17 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು . ಧರಿಯಾಪುರದ ಉಪ್ಪಿನ ಲೇಔಟ್ನ ಮನೆಯಲ್ಲಿ ಫೋನ್ ಪೇ ಮೂಲಕ ಹಣ ಪಡೆಯುವ ವೇಳೆ ಪ್ರೀತಿರಾಜ್ ಅವರನ್ನು ವಶಕ್ಕೆ ಪಡೆಯಲಾಗಿದೆ . ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ .
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ , ಸಿಬ್ಬಂದಿ ಮಸೂದ್ , ಮಲ್ಲಿನಾಥ್ , ಬಸವರಾಜ್ , ಸಂತೋಷ , ಮಧುಮತಿ ಮತ್ತು ಪ್ರಮೋದ್ ಅವರಿದ್ದ ತಂಡ ದಾಳಿ ನಡೆಸಿದೆ .