ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ವಿಶೇಷ ಪುರಸ್ಕಾರವು ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರ ಕೋವಿಡ್ ಕಥೆಗಳು ಕೃತಿಗೆ ಲಭಿಸಿದೆ ಎಂದು ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಾಧ್ಯಮ ರಂಗದಲ್ಲಿ ತುಂಬಾ ಪರಿಣಾಮ ಬೀರಿರುವ ಪುಸ್ತಕ `ಕೋವಿಡ್ ಕಥೆಗಳು’ ತೀರಾ ಭಿನ್ನವಾಗಿ ಮೂಡಿದೆ. ಕೊರೋನಾ ಕಾಲಘಟ್ಟದಲ್ಲಿ ಆಗಿರುವ ಸಾವು-ನೋವು ಕಥೆಗಳನ್ನೊಳಗೊಂಡ ಈ ಕೃತಿ ಪತ್ರಿಕಾ ವಲಯದಲ್ಲಿ ಗಂಭೀರ ಪರಿಣಾಮ ಉಂಟುಮಾಡಿದೆ. ಕೊರೋನಾ ಸಂದರ್ಭದಲ್ಲಿ ಟಿವಿ ಸಂದರ್ಶನವೊಂದರಲ್ಲಿ ಶಿವಾನಂದ ತಗಡೂರು ಅವರ ಮಾತು ಮತ್ತು ಚಿಕಿತ್ಸೆಯ ಸಲಹೆಗಳನ್ನು ಕೇಳಿದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಂದೆಯವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದರು. ಇಂತಹ ಜನಪರವಾದ ಕೃತಿಗೆ ಅಮ್ಮ ವಿಶೇಷ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಪ್ರಸ್ತುತ ವರ್ಷದಿಂದ ಪ್ರತಿ ವರ್ಷವೂ ಮಾಧ್ಯಮದವರು ಬರೆದ ಒಂದು ಪುಸ್ತಕಕ್ಕೆ ವಿಶೇಷ ಪುರಸ್ಕಾರವನ್ನು ನೀಡಲಾಗುವುದು ಎಂದರು.
ನ.26 ರಂದು ಸಂಜೆ 5.30ಕ್ಕೆ ಸೇಡಂ ಪಟ್ಟಣದ ಶ್ರೀ ಪಂಚಲಿ೦ಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿಯೇ ಈ ವಿಶೇಷ ಪುರಸ್ಕಾರ ನೀಡಲಾಗುವದು ಎಂದು ತಿಳಿಸಿದ್ದಾರೆ.