ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ಸುಪ್ರಸಿದ್ದ ದಂಡಗುಂಡ ಬಸವೇಶ್ವರ ಭವ್ಯ ರಥೋತ್ಸವ ಭಕ್ತ ಸಾಗರದ ಮಧ್ಯ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆಯಿಂದಲೆ ದೇವಸ್ಥಾನಕ್ಕೆ ಭಕ್ತರ ದಂಡೆ ಹರಿದು ಬಂದಿತು. ಸಾತನೂರ ಗ್ರಾಮದಿಂದ ಶುರುವಾದ ಭಕ್ತರ ದಾಸೋಹ ಸೇವೆ ದೇವಸ್ಥಾನದ ದಾರಿಯುದ್ದಕ್ಕೂ ನಿರಂತರವಾಗಿತ್ತು. ಹೆಗಲ ಮೇಲೆ ದವಸ ಧಾನ್ಯಗಳ ಚೀಲಗಳನ್ನು ಹೊತ್ತು ಕಾಲ್ನಡಿಗೆಯ ಮೂಲಕ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಪುರವಂತರ ಸೇವೆ, ಧರ್ಮದ ಧ್ವಜಗಳು, ಉಚ್ಚಾಯಿ, ಸುಮಂಗಲಿಯರಿಂದ ಆರತಿ, ಕುಂಭ, ಭಜನೆ, ಗೀಗೀ ಪದಗಳು, ಜಾನಪದ ಕಲಾವಿದರಿಂದ ಭಜನೆ ಸೇರಿದಂತೆ ವಿಶೇಷ ಹಾಡುಗಳು ಜನಮನ ಸೆಳೆದವು. ಕುಂಭ, ಕಳಸ, ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಿತು. ದೇವಸ್ಥಾನ ಸುತ್ತಲು ದೀಪಾಲಂಕಾರ ಮತ್ತು ಹೂವಿನ ಅಲಂಕಾರ ಕಂಗೊಳಿಸುತ್ತಿತ್ತು. ಹಣತೆ ದೀಪಗಳ ಸಾಲುಗಳು ರಾರಾಜಿಸುತ್ತಿದ್ದವು.
ತೋನಸನಹಳ್ಳಿಯ ಅಲ್ಲಮ ಪ್ರಭು ಸಂಸ್ಥಾನ ಮಠದ ಮಲ್ಲಣ್ಣಪ್ಪ ಮುತ್ಯಾ, ಪೇಠಶಿರೂರ ಶ್ರೀಗಳು, ದೇವಸ್ಥಾನದ ಸಮಿತಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಉಪಾಧ್ಯಕ್ಷ ಹಾಗೂ ಎಂಎಲ್ಸಿ ಬಿ.ಜಿ ಪಾಟೀಲ್, ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಪ್ರಮುಖರಾದ ಭೀಮಣ್ಣ ಸಾಲಿ, ರಾಜಶೇಖರ ಪಾಟೀಲ ಸಂಕನೂರ, ಬಸವರಾಜಗೌಡ ಭಾಸರೆಡ್ಡಿ, ಮಹಾಂತಗೌಡ ಪಾಟೀಲ್, ಭೀಮರಾಯಗೌಡ ಚಾಮನೂರ, ಶಾಂತಣ್ಣ ಚಾಳಿಕರ್, ಅಪ್ಪು ಕಣಕಿ, ಆನಂದಗೌಡ ಸಂಕನೂರ, ವೀರೇಂದ್ರಗೌಡ ಭಾಸರೆಡ್ಡಿ ನಾಲವಾರ, ಉದ್ಯಮಿ ದಯಾನಂದ, ಡಿ.ಎಸ್ ಮ್ಯಾಕ್ಸ್, ವಿಕ್ರಂ ಪಾಟೀಲ್ ಮಾರಡಗಿ, ಡಾ.ಎಸ್.ಬಿ ಕಾಮರೆಡ್ಡಿ, ಶಿವರೆಡ್ಡಿ ಪಾಲಪ್, ವಿಶ್ವರಾಧ್ಯ ಪಾಟೀಲ್ ಕರದಾಳ, ಪ್ರಸಾದ ಅವಂಟಿ, ಗುರುರಾಜ ಹೂಗಾರ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಸಿಪಿಐ
ಎಸ್.ಸಿ ಪಾಟೀಲ್, ಪಿಎಸ್ ಐಗಳಾದ ಮಂಜುನಾಥ ರೆಡ್ಡಿ, ಚಿದಾನಂದ, ವಿಶ್ವನಾಥ, ಹೊನ್ನಜಂಕಾರ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ಭದ್ರತೆಯಲ್ಲಿ ದರ್ಶನ ಪಡೆದ ಶ್ರೀಗಳು
ದಂಡಗುಂಡ ದೇವಸ್ಥಾನದ ಟ್ರಸ್ಟ್ ಹಾಗೂ ಸಂಗಮೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಂಗನಬಸವ ಶಿವಚಾರ್ಯರ ಮಧ್ಯೆ ಮಠದ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಗಳು ಸೃಷ್ಠಿಯಾಗಿದ್ದವು. ಕಳೆದೆರಡು ವರ್ಷದಿಂದ ಶ್ರೀಗಳು ಜಾತ್ರೆಯ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಕಳೆದ ವರ್ಷದಂತೆ ಈ ವರ್ಷವೂ ಕೂಡ ಶ್ರೀಗಳು ಡಿವೈಎಸ್ಪಿ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.