ಸುದ್ದಿ ಸಂಗ್ರಹ ಶಿವಮೊಗ್ಗ
ನಗರದ ಕಾಂಗ್ರೆಸ್ ಭವನದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಎಐಸಿಸಿ ವೀಕ್ಷಕ ಶರತ್ ಎದುರಲ್ಲೆ ಕಾಂಗ್ರೆಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.
ಸಭೆ ನಡೆಯುತ್ತಿದ್ದ ವೇಳೆ ಮುಖಂಡ ರಂಗೇಗೌಡರನ್ನು ಕಾಂಗ್ರೆಸ್ ಕಚೇರಿ ಸಭಾಂಗಣಕ್ಕೆ ಬಿಡದೆ ತಡೆಯಲಾಗಿದೆ. ಇದೆ ವಿಚಾರಕ್ಕೆ ದಕ್ಷಿಣ ಬ್ಲಾಕ್ ಅಧ್ಯಕ್ಷ ಕಲಿಂ ಪಾಷಾ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡ ರಂಗೇಗೌಡ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭ ಕಲಿಂ ಪಾಷಾ ಬೆಂಬಲಿಗರು ರಂಗೇಗೌಡರ ಶರ್ಟ್ ಕಾಲರ್ ಹಿಡಿದಿದ್ದಾರೆ. ವಾಗ್ವಾದ ತಾರಕಕ್ಕೇರಿ ಕೆಲ ಕಾರ್ಯಕರ್ತರು ಸಭಾಂಗಣದಲ್ಲಿದ್ದ ಚೇರ್ಗಳನ್ನು ಪುಡಿ-ಪುಡಿ ಮಾಡಿದ್ದಾರೆ.
ಗಲಾಟೆ ಜೋರಾಗುತ್ತಿದ್ದಂತೆ ಎಐಸಿಸಿ ವೀಕ್ಷಕ ಶರತ್ ಕೂಡಲೆ ಸಭೆ ಅಂತ್ಯಗೊಳಿಸಿ ಅಲ್ಲಿಂದ ತೆರಳಿದ್ದಾರೆ. ಬಳಿಕ ಪೊಲೀಸರು ಕಾಂಗ್ರೆಸ್ ಕಚೇರಿಗೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನ ವಾಪಸ್ ಕಳುಹಿಸಿದ್ದಾರೆ. ಸದ್ಯ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ.