ಸುದ್ದಿ ಸಂಗ್ರಹ ಶಹಾಬಾದ್
ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಂಡು ಕುಟುಂಬವನ್ನು ತೊಂದರೆಗೆ ಸಿಲುಕದಂತೆ ಎಚ್ಚರ ವಹಿಸಿ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪಿ.ಎಸ್ ವನಂಜಕರ್ ಹೇಳಿದರು.
ನಗರದ ಎಸ್ಎಸ್ ಮರಗೋಳ ಪದವಿ ಪೂರ್ವ ಕಾಲೇಜುನಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್, ಶಹಾಬಾದ ಉಪ ವಿಭಾಗದ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಣಿಕೆ ವಿರೋಧಿ ದಿನವನ್ನು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವ್ಯಸನ ಹಾಗೂ ನಶಾಮುಕ್ತ ಭಾರತ ಡ್ರಗ್ಸ್ ಫ್ರೀ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಗೆ ಯುವಕರ ಸಹಕಾರ ಬಹಳ ಅಗತ್ಯ ಎಂದರು.
ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದಂದು ನಾವು ಪ್ರತಿಜ್ಞೆ ಮಾಡಲು ಸೇರಿದ್ದೇವೆ ನಮ್ಮ ಜೀವನ ಮತ್ತು ನಮ್ಮ ಸಮಾಜವನ್ನೂ ಡ್ರಗ್ಸ್ ಎಂಬ ಕರಾಳ ನೆರಳಿನಿಂದ ರಕ್ಷಿಸುವ ಪ್ರತಿಜ್ಞೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜ್ ಹಿರೇಮಠ ಮಾತನಾಡಿ, ದೇಶದ ಮಹಾನ್ ವ್ಯಕ್ತಿ ಡಾ. ಎಪಿಜೆ ಅಬ್ದುಲ್ ಕಲಾಂ ಹೇಳಿದಂತೆ, ‘ಕನಸು ಕಾಣಿ, ಆ ಕನಸು ನಿಮ್ಮನ್ನು ನಿದ್ರಿಸಲು ಬಿಡದಿರಲಿ’. ಡ್ರಗ್ಸ್ ನಿಮ್ಮ ಕನಸುಗಳನ್ನು ಕಿತ್ತುಕೊಳ್ಳುತ್ತದೆ. ಅದಕ್ಕಾಗಿ ನಾವು ಇಂತಹ ಮಾದಕ ವಸ್ತುಗಳಿಗೆ ಬಲಿಯಾಗದೆ, ಆರೋಗ್ಯವಂತ ದೇಹ, ಸ್ವಚ್ಛ ಮನಸ್ಸು ಇಟ್ಟುಕೊಂಡರೆ ವಿಕಸಿತ ಭಾರತ ಕಟ್ಟಲು ಸಾಧ್ಯ. ಎಂದರು.
ಡಾ. ವೆಂಕಟರಾಜಪ್ಪ, ಡಾ. ಹನುಮಂತಪ್ಪ ಸೇಡಂಕರ್ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ದೊಡ್ಡಪ್ಪ ಪೂಜಾರಿ, ಗಂಗಾಧರ್ ಸೌದಿ, ಸಂತೋಷ್ ದೊಡ್ಮನಿ ಮತ್ತು ಪೊಲೀಸ್ ಠಾಣೆ ಸಿಬ್ಬಂದಿ ಸೇರಿದಂತೆ ಕಾಲೇಜಿನ ಸಿಬ್ಬಂದಿ, ಬೋಧಕ- ಬೋಧಕೇತರ ಉಪನ್ಯಾಸಕರ ಬಳಗ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿವಕುಮಾರ್ ಕುಸಾಳೆ ನಿರೂಪಿಸಿ, ವಂದಿಸಿದರು.