ಸುದ್ದಿ ಸಂಗ್ರಹ ವಾಡಿ
ಪಟ್ಟಣದ ನಿವಾಸಿಗಳಿಗೆ ರಸ್ತೆ ಸೇರಿದಂತೆ ಇತರ ಮೂಲ ಸೌಲಭ್ಯಗಳನ್ನು ಒದಗಿಸಕೊಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ
ಮನೋಜಕುಮಾರ ಗುರಿಕಾರ ಅವರಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಿಸಿದರು.
ಪಟ್ಟಣದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ, ಚರಂಡಿ ನೀರು ತಗ್ಗು ಪ್ರದೇಶಗಳಲ್ಲಿ, ಅಂಗಡಿಗಳಲ್ಲಿ ಮತ್ತು ಮನೆಗಳಲ್ಲಿ ನುಗ್ಗುವುದು ಸಾಮಾನ್ಯವಾಗಿದೆ ಎಂದರು.
ಪಟ್ಟಣದ ಪ್ರಮುಖ ರಸ್ತೆಗಳಾದ ಯಾದಗಿರಿ ರಸ್ತೆ, ರಾವೂರ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆ, ಚರಂಡಿ ಮೇಲೆಯೇ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತದೆ. ಮುಖ್ಯ ರಸ್ತೆಯ ಪರಿಸ್ಥಿತಿ ಇದಾದರೆ ಬಡಾವಣೆಗಳಲ್ಲಿ ಸೂಕ್ತವಾದ ಚರಂಡಿಯೇ ಇಲ್ಲ. ಚರಂಡಿ ಇದ್ದರೂ ಸ್ಲ್ಯಾಬ್ ಇಲ್ಲ. ಇದರಿಂದ ಚರಂಡಿಗಳು ತುಂಬಿ ಗಬ್ಬೆದ್ದು ನಾರುವುದು ನಾವು ಕಾಣುತ್ತೆವೆ. ಕೋಟ್ಯಾಂತರ ರೂಪಾಯಿಗಳ ವೆಚ್ಚದ ನೀರು ಶುದ್ದೀಕರಣ ಘಟಕ ಇದ್ದರೂ ಕುಡಿಯುವುದಕ್ಕೆ ಯೋಗ್ಯವಾಗಿಲ್ಲ,
ಚರಂಡಿಗಳಲ್ಲಿ ತುಂಬಿದ ಹೂಳನ್ನು ಸ್ವಚ್ಛಗೊಳಿಸಿ ಮಳೆ ನೀರು ನಿಲ್ಲದೆ, ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಿ, ರಸ್ತೆಗಳಲ್ಲಿ ತಗ್ಗು-ಗುಂಡಿಗಳಿಗಳನ್ನು ಮುಚ್ಚಿಸಿ ನೀರು ನಿಲ್ಲದಂತೆ ಮಾಡಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಮುಂಜಾಗ್ರತೆ ಕ್ರಮ ಅನುಸರಿಸಿ ಎಂದರು.
ಮಳೆಗಾಲದಲ್ಲಿ ಸ್ವಚ್ಛತೆ ಕಾಪಾಡಿ ರೋಗ-ರುಜಿನಗಳು ಹರಡದಂತೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ವಿದ್ಯುತ್ ಸಂಪರ್ಕ, ಬೀದಿ ದ್ವೀಪದ ವ್ಯವಸ್ಥೆ ಬಗ್ಗೆ ಮತ್ತು ಅವಘಡ ಸಂಭವ ಕೂಡಾ ಹೆಚ್ಚಾಗಿರುವುದು ಅದಕ್ಕಾಗಿ ವಿದ್ಯುತಚ್ಛಕ್ತಿ ಮಂಡಳಿಗೂ ಜಾಗೃತವಾಗಿರಲು ತಿಳಿಸಿ ಎಂದರು.
ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಜನ-ಜಾನುವಾರುಗಳಿಗೆ ಕಚ್ಚುವುದರಿಂದ ಸಾಂಕ್ರಾಮಿಕ ರೋಗಗಳು ಬರುವುದನ್ನು ತಡೆಗಟ್ಟಲು ಫಾಗಿಂಗ್ ಮಾಡಿಸಿ. ಕಳೆದ ಸಲ ಕುಡಿಯುವ ನೀರಿನ ಪೈಪುಗಳಲ್ಲಿ ರಸ್ತೆ, ಚರಂಡಿ ನೀರು ಬಂದಿರುವುದು ಕೂಡಾ ಇದೆ, ಇದರಿಂದ ಅನೇಕ ಜನರ ವಾಂತಿ-ಭೇದಿಯಿಂದ ಆಸ್ಪತ್ರೆಗೆ ಅಲೆದಾಡುವುದು ಕಂಡಿದ್ದೆವೆ ಎಂದರು.
ಅವೈಜ್ಞಾನಿಕ ರಸ್ತೆ, ಒಳಚರಂಡಿ ವ್ಯವಸ್ಥೆಯಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಜನರ ಗೋಳಾಟ ತಪ್ಪಿದ್ದಲ್ಲ, ಪ್ರತಿವರ್ಷವು ಈ ತೊಂದರೆ ಮರುಕಳಿಸದಂತೆ ಮುಂಜಾಗ್ರತೆ ವಹಿಸಿ ಎಂದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಪಟ್ಟಣದ ನಾಗರಿಕರಿಗೆ ಬೂತ್ ಮಟ್ಟದ ಅಧಿಕಾರಿಗಳು ಸಾಕಷ್ಟು ಗೊಂದಲ ಸೃಷ್ಟಿ ಮಾಡಿದ್ದು ಇದರ ಬಗ್ಗೆ ಆದಷ್ಟು ಬೇಗ ಸಭೆ ಕರೆದು ಗೊಂದಲ ನಿವಾರಿಸಿ. 15ನೇ ಹಣಕಾಸು, ಪುರಸಭೆ ನಿಧಿಯಿಂದ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಯ ತಾರತಮ್ಯ ಆಗದಂತೆ ನಿರ್ವಹಿಸಿ, ಮುಖ್ಯ ಒಳಚರಂಡಿ ಕಾಲುವೆಯಿಂದಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸಿ ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ, ಬಿಜೆಪಿ ಮುಖಂಡ ಕಿಶನ ಜಾಧವ, ವಿಶ್ವರಾಧ್ಯ ತಳವಾರ ಇದ್ದರು.