ಸೈಬರ್‌ ವಂಚಕರ ಖೆಡ್ಡಾಕ್ಕೆ ಬಿದ್ದು ಕೋಟಿ ರೂಪಾಯಿ ಕಳೆದುಕೊಂಡ ಭೂಪ

ಜಿಲ್ಲೆ

ಸುದ್ದಿ ಸಂಗ್ರಹ ಚಿಕ್ಕಮಗಳೂರು
ಕಡೂರು ತಾಲೂಕಿನ ಶಿವಪುರ ಗ್ರಾಮದ ವ್ಯಕ್ತಿಯೊಬ್ಬ ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭ ಮಾಡುವ ಆಸೆಗೆ ಬಿದ್ದು, ಆನ್‌ಲೈನ್‌ ಟ್ರೇಡಿಂಗ್‍ ನಂಬಿ 1,28,10,000 ರೂ. ಹಣ ಕಳೆದುಕೊಂಡಿದ್ದಾನೆ.

ಗ್ರಾಮದ ಕಲ್ಲೇಗೌಡ ಹಣ ಕಳೆದುಕೊಂಡ ನತದೃಷ್ಟ. ಈತ ಫೇಸ್ಬುಕ್‌ನಲ್ಲಿ ಟ್ರೇಡಿಂಗ್ ಲಿಂಕ್ ನೋಡಿದ್ದ. ಅದನ್ನ ಕ್ಲಿಕ್‌ ಮಾಡಿ ಬಳಿಕ ವಾಟ್ಸಾಪ್‌ನಲ್ಲಿ ಗ್ರೂಪ್‌ ಒಂದಕ್ಕೆ ಸೇರಿದ್ದ. ಅಲ್ಲಿಂದ ಟ್ರೇಡಿಂಗ್ ಲಿಂಕ್‍ನಲ್ಲಿ ಅಕೌಂಟ್ ತೆರೆದಿದ್ದ. ಆರಂಭದಲ್ಲಿ 60 ಸಾವಿರ ರೂ. ಹಣ ಹಾಕಿದ್ದ. ಈ ವೇಳೆ 17,800 ರೂ. ಲಾಭದ ಹಣವನ್ನ ಹಾಕಿ ಆನ್ ಲೈನ್ ವಂಚಕರು ನಂಬಿಸಿದ್ದರು.

ಹೆಚ್ಚಿನ ಹಣ ಹಾಕಿದರೆ ಹೆಚ್ಚು ಲಾಭ ಬರುತ್ತೆ ಎಂದು ಅವರು ಹೇಳಿದಾಗೆಲ್ಲ ಹಂತ ಹಂತವಾಗಿ ಹಣ ಹಾಕಿದ್ದ. ಹೀಗೆ ಬರೋಬ್ಬರಿ 1 ಕೋಟಿ 28 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ ಈ ಬಾರಿ ಲಾಭ ಮಾತ್ರ ಬರಲಿಲ್ಲ. ಹಣ ವಿಥ್ ಡ್ರಾ ಮಾಡಲು ನೋಡಿದ್ದಾರೆ, ಅದೂ ಆಗಿಲ್ಲ. ಬಳಿಕ ತಾನು ಮೋಸ ಹೋಗಿರುವುದು ಅರಿವಾದ ಕಲ್ಲೇಗೌಡ, ಚಿಕ್ಕಮಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *