ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದ ಮಕ್ಕಳ ಅಣಕು ವಿಧಾನಸಭಾ ಅಧಿವೇಶನ

ತಾಲೂಕು

ಸುದ್ದಿ ಸಂಗ್ರಹ ಚಿತ್ತಾಪುರ
ಚಟುವಟಿಕೆ ಮೂಲಕ ಪಠ್ಯದ ಕಲಿಕಾoಶ ಮಾಡಿಸಿದಾಗ ಕಲಿಕೆಯು ಮಕ್ಕಳಲ್ಲಿ ಶಾಶ್ವತವಾಗಿ ಮನದಟ್ಟಾಗುತ್ತದೆ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಹೇಳಿದರು.

ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚುನಾವಣೆ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಅಣಕು ವಿಧಾನಸಭಾ ಅಧಿವೇಶನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರತಿಭೆ ಇದೆ, ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಮಕ್ಕಳ ಪ್ರತಿಭೆ ಅನಾವರಣವಾಗಲು ಸಾಧ್ಯ ಎಂದರು.

ಕಾವ್ಯ (ಸಭಾಪತಿ): ಸಭಾಪತಿ ಪಾತ್ರ ನನಗೆ ಹೆಚ್ಚು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಶಿಕ್ಷಕರು ಉತ್ತಮ ಅವಕಾಶ ನೀಡಿದ್ದರಿಂದ ಇಂತಹ ಪಾತ್ರ ಮಾಡಲು ಸಾಧ್ಯವಾಯಿತು. ಇದರಿಂದ ನಮ್ಮಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು.

ಸಿದ್ದಲಿಂಗ ಬಾಳಿ (ಶಿಕ್ಷಕ): ಮಕ್ಕಳಲ್ಲಿ ಪ್ರತಿಭೆ ಇದೆ. ಆದರೆ ಶಿಕ್ಷಕರು ಪಠ್ಯದ ಕಲಿಕಾoಶಗಳನ್ನು ಮಕ್ಕಳಿಂದ ಚಟುವಟಿಕೆ ರೂಪದಲ್ಲಿ ಮಾಡಿಸುವ ಮೂಲಕ ಮಕ್ಕಳನ್ನು ಕ್ರಿಯಾಶೀಲಗೊಳಿಸಬೇಕು. ಆಡಳಿತ ಮಂಡಳಿ, ಶಿಕ್ಷಕರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದರು.

ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಹೂಗಾರ ಮತ್ತು ಬಿ.ಆರ್.ಪಿ ಆದಪ್ಪ ಸಜ್ಜನ್ ಮಾತನಾಡಿದರು.

ಒಂದು ಕಡೆ ನಿರಾವರಿಯಲ್ಲಿ ಮಲತಾಯಿ ಧೋರಣೆ, ಅನೇಕ ಅಭಿವೃದ್ಧಿ ಯೋಜನೆಗಳಲ್ಲಿ ಸರಕಾರ ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ, ಭ್ರಷ್ಟಚಾರ, ರೈತರ ಸಮಸ್ಯೆಗಳು, ಸಾರಿಗೆ ಸಮಸ್ಯೆ, ಶಾಲೆಗಳ ದುಸ್ಥಿತಿ ಹೀಗೆ ರಾಜ್ಯದ ಅನೇಕ ಸಮಸ್ಯೆಗಳಿಗೆ ಮಕ್ಕಳ ಅಣಕು ಚಳಿಗಾಲದ ಅಧಿವೇಶನ ಸಾಕ್ಷಿಯಾಯಿತು.

ಒಂದು ವಾರದ ಪೂರ್ವ ತಯಾರಿಯಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಸಿದ್ದಲಿಂಗ ಬಾಳಿ ಆಯ್ದ ಮಕ್ಕಳಿಗೆ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬರುವ ವಿಧಾನಸಭೆಯ ಕಲಿಕಾoಶವನ್ನು ಒಂದು ಚಟುವಟಿಕೆ ರೂಪದಲ್ಲಿ ಅಣಕು ಅಧಿವೇಶನ ಮಾಡುವ ಮೂಲಕ ಮಕ್ಕಳಿಗೆ ವಿಷಯ ವಸ್ತು ಮನದಟ್ಟು ಮಾಡುವ ಜೊತೆಗೆ ಮಕ್ಕಳ ಪ್ರತಿಭೆ ಹೊರತರುವ ಪ್ರಯತ್ನ ಮಾಡಿದರು.

ಅಧಿವೇಶನದಲ್ಲಿ ಭಾಗವಹಿಸಿದ 45 ಮಕ್ಕಳು ಸಭಾಪತಿಯಾಗಿ, ಮುಖ್ಯಮಂತ್ರಿಯಾಗಿ, ಸಚಿವರಾಗಿ, ಶಾಸಕರಾಗಿ ರಾಜ್ಯದಲ್ಲಿನ ವಿದ್ಯಮಾನಗಳ ಕುರಿತು ವಾದ ಪ್ರತಿವಾದ ಮಾಡಿದರು. ಮಕ್ಕಳ ನಿರರ್ಗಳ ಮಾತುಗಳು, ವೇಷಭೂಷಣ, ಹಾವಭಾವ ನೋಡುಗರನ್ನು ಹುಬ್ಬರಿಸುವಂತೆ ಮಾಡಿತು.

ಸಂಸ್ಥೆಯ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಪ್ರಾಚಾರ್ಯ ಕಾಂತಪ್ಪ ಬಡಿಗೇರ್, ಮುಖ್ಯಗುರು ವಿದ್ಯಾಧರ ಖಂಡಾಳ ಉಪಸ್ಥಿತರಿದ್ದರು.

ಸಭಾತಿಯಾಗಿ ಕಾವ್ಯ, ಮುಖ್ಯಮಂತ್ರಿಯಾಗಿ ಅಪೂರ್ವ ಹಾಗೂ ವಿರೋಧ ಪಕ್ಷದ ನಾಯಕನಾಗಿ ಸುನೀಲ್ ಸೇರಿದಂತೆ ಸಚಿವರಾಗಿ, ಶಾಸಕರಾಗಿ ಮಕ್ಕಳು ಉತ್ತಮ ಪ್ರದರ್ಶನ ಮಾಡಿ ಶಿಕ್ಷಕರ ಮೆಚ್ಚುಗೆ ಗಳಿಸಿದರು.

ಉತ್ತಮ ಪ್ರದರ್ಶನ ತೋರಿದ ಅಪೂರ್ವ, ಸುನೀಲ್ ಮತ್ತು ಸೌಪರ್ಣಿಕಗೆ ನಗದು ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರೌಢ ಶಾಲಾ ವಿಭಾಗದ ಶಿಕ್ಷಕರು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *