ಬೆಂಗಳೂರು: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂ ಲಂಚ ಪಡೆದಿರುವ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಮಾಡಲಾಗಿತ್ತು. ಆ ನಂತರ 13 ಜನ ಅಧಿಕಾರಿಗಳು ಅಮಾನತು ಆಗಿದ್ದರು. ಈಗ ಲಂಚ ಪಡೆಯುವ ಸರದಿ ಕೆಎಸ್ಆರ್ಟಿಸಿಗೂ ಕಾಲಿಟ್ಟಿದೆ.
ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದಿರುವದು ಸಾಕ್ಷಿ ಲಭ್ಯವಾಗಿದೆ. ಕೆಎಸ್ಆರ್ಟಿಸಿ ಡಿಪೋ- 1 ರಲ್ಲಿ ಸುಮಾರು 100 ಬಸ್ಗಳಿವೆ. ಈ ಬಸ್ಗಳು ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸುತ್ತವೆ. ಇದರಿಂದ ಚಾಲಕ ಮತ್ತು ಕಂಡಕ್ಟರ್ಗಳಿಗೆ ಸಾವಿರಾರು ರೂ ಭತ್ಯೆ ಮತ್ತು ಒಟಿ ದೊರೆಯುತ್ತದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ಪೆಕ್ಟರ್ (ATI) ಸಂಗೀತ, ಅಸಿಸ್ಟೆಂಟ್ ಟ್ರಾಫಿಕ್ ಸೂಪರಿಂಟೆಂಡೆಂಟ್ (ATS) ಸ್ವಪ್ನ, ಡ್ರೈವರ್ ಮತ್ತು ಕಂಡಕ್ಟರ್ಗಳಿಂದ ಗೂಗಲ್ ಪೇ, ಫೋನ್ ಪೇ ಮೂಲಕ ಲಕ್ಷಾಂತರ ರೂ ಲಂಚ ಪಡೆದಿದ್ದು, ಈ ಬಗ್ಗೆ ಕೆಎಸ್ಆರ್ಟಿಸಿ ಎಂಡಿಗೆ ದಾಖಲೆ ಸಮೇತ ದೂರು ನೀಡಲಾಗಿದೆ.
ಹಣ ನೀಡಿಲ್ಲವೆಂದಾದರೆ ಅಂತಹ ಡ್ರೈವರ್, ಕಂಡಕ್ಟರ್ಗಳಿಗೆ ಸರಿಯಾಗಿ ಡ್ಯೂಟಿ ನೀಡದೆ ಮತ್ತು ರಜೆ ನೀಡದೆ ಸತಾಯಿಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಡ್ರೈವರ್, ಕಂಡಕ್ಟರ್ಗಳು ಅನಿವಾರ್ಯವಾಗಿ ಲಂಚ ನೀಡಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈ ಇಬ್ಬರು ಅಧಿಕಾರಿಗಳು ಕೇವಲ ಉದಾಹರಣೆ ಅಷ್ಟೇ, ಕೆಎಸ್ಆರ್ಟಿಸಿ ಡಿಪೋಗಳಲ್ಲಿ ಲಂಚ ನೀಡಿದರೆ ಮಾತ್ರ ಡ್ಯೂಟಿ ಎಂಬ ಕೆಟ್ಟ ವ್ಯವಸ್ಥೆ ಜಾರಿಯಲ್ಲಿದ್ದು, ಈ ಹಣದಲ್ಲಿ ಹಿರಿಯ ಅಧಿಕಾರಿಗಳಿಗೂ ಪಾಲಿದೆ ಎಂಬ ಗಂಭೀರ ಆರೋಪವಿದೆ.
ಕೆಎಸ್ಆರ್ಟಿಸಿ ಅಧಿಕಾರಿಗಳು ಲಂಚ ಪಡೆದ ಆರೋಪ: ಸಾರಿಗೆ ಸಚಿವರು ಹೇಳಿದ್ದೆನು ?
ಕೆಎಸ್ಆರ್ಟಿಸಿ ಅಧಿಕಾರಿಗಳು ಲಂಚ ಪಡೆಯುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕೂಡಲೇ ಕ್ರಮ ಕೈಗೊಳ್ಳಲು ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷ ಅವರಿಗೆ ಸೂಚನೆ ನೀಡುತ್ತೆನೆ ಎಂದಿದ್ದಾರೆ.
ಒಟ್ಟಿನಲ್ಲಿ, ಹಗಲು ರಾತ್ರಿ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವ ಕಂಡಕ್ಟರ್, ಡ್ರೈವರ್ಗಳ ಬಳಿಯೇ ಈ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದರೆ, ಇವರಿಗೆಲ್ಲ ಹಿರಿಯ ಅಧಿಕಾರಿಗಳ ಬೆಂಬಲ ಇಲ್ಲದೆ ಇರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸರಿಯಾದ ತನಿಖೆ ಮಾಡಿದರೆ ಎಲ್ಲವೂ ಬಯಲಿಗೆ ಬರಲಿದೆ.