ಕಲಬುರಗಿ: ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಭಕ್ತಿಯ ಶರಣಾಂಜಲಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಪೂಜ್ಯ ಅಪ್ಪಾಜಿ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ, ದೇಶಕ್ಕೆ ಮಾದರಿಯಾದ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ಕೋಟ್ಯಾಂತರ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಅವರು ವಿದ್ಯಾ ಭಂಡಾರಿ, ಜ್ಞಾನದ ದೀವಿಗೆ. ನವದೆಹಲಿಯ ಸಂಸತ್ತಿನ ಎದುರುಗಡೆ ಮಹಾತ್ಮ ಬಸವೇಶ್ವರರ ಪುತ್ತಳಿಯನ್ನು ಸ್ಥಾಪಿಸುವ ಮೂಲಕ, ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ದೇಶದೆಲ್ಲೆಡೆ ಪಸರಿಸಿದ್ದಾರೆ. ಅಪ್ಪಾಜಿಯವರ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕೊಡುಗೆ ಅನನ್ಯವಾಗಿದೆ. ಅವರು ಶ್ರೇಷ್ಟ ಶಿಕ್ಷಣ ತಜ್ಞರು, ಚಿಂತಕರು, ತತ್ವಜ್ಞಾನಿಗಳು, ಸಮಾಜ ಸೇವಕರು. ಪೂಜ್ಯರ ಅಗಲಿಕೆ ನಾಡು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಭಾಗ್ಯಶ್ರೀ ಕಾರಬಾರಿ, ಮುಸ್ಕಾನ್ ಶೇಖ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.