ವಾಡಿ: ಪಟ್ಟಣದಲ್ಲಿ ಮತ್ತೆ ರಾಡಿ ನೀರು ಪೂರೈಕೆಯಾಗುತ್ತಿರುವದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಕಲುಷಿತ ನೀರನ್ನೆ ಬಳಸುವ ಪರಿಸ್ಥಿತಿ ಮುಂದುವರೆದಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪುರಸಭೆ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಹಿತಾಸಕ್ತಿಗಾದರೂ ಕ್ರಮಕೈಗೊಳ್ಳಿ ಎಂದು ಸುಮಾರು ಸಲ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಗಮನಕ್ಕೆ ತಂದರು ಇದುವರೆಗೆ ಅದೆ ಪರಿಸ್ಥಿತಿ ಮುಂದುವರೆದಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ನಿರ್ಮಾಣವಾದರು ಸಹ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯಿಂದ ನೀರು ಶುದ್ದಿಕರಣ ಗೊಳ್ಳುತ್ತಿಲ್ಲ. ಇಲ್ಲಿನ ಅನೇಕ ಬಡ ಕುಟುಂಬಗಳು ತಮ್ಮ ದಿನಗೂಲಿಯ ದುಡಿಮೆಯ ದುಡ್ಡನ್ನು ಆಸ್ಪತ್ರೆಗೆ ಹಾಕಿ ಪರದಾಡುತ್ತಿದ್ದಾರೆ.
ಮಳೆಗಾಲ ಸಂಧರ್ಭದಲ್ಲಿ ಅಶುದ್ಧ ನೀರು ಕುಡಿಯುವುದರಿಂದ ಅನೇಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಈಗಲಾದರೂ ಬಳಸಲು ಯೋಗ್ಯ ನೀರು ಪೂರೈಸಲು ಪುರಸಭೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲಿ, ಇಲ್ಲದೆ ಹೋದರೆ ಕೆಲವೇ ದಿನಗಳಲ್ಲಿ ಪುರಸಭೆ ಎದುರು ಸಾರ್ವಜನಿಕರು ಹಾಗೂ ನಮ್ಮ ಪಕ್ಷದ ಮುಖಂಡರು ಶುದ್ಧ ನೀರಿಗಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದರು.