ಆ ಒಂದು ಮಾತು ಆಡಿದ್ದಕ್ಕೆ ASI ಕೊಂದು ಆಕೆ ಕೆಲಸ ಮಾಡುತ್ತಿದ್ದ ಠಾಣೆಗೆ ಶರಣಾದ ಯೋಧ

ಅಪರಾಧ ರಾಷ್ಟೀಯ

ಗುಜರಾತ್​: ಕಚ್​ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಲಿವ್​ ಇನ್​ ಸಂಗಾತಿ ಹಾಗೂ ಸಿಆರ್​ಪಿಎಫ್​ ಕಾನ್​​ಸ್ಟೆಬಲ್​ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಮೃತಳನ್ನು ಅರುಣಾಬೆನ್ ನಾಥುಭಾಯ್ ಜಾದವ್ (25) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ದಿಲೀಪ್ ಡಾಂಗ್ಚಿಯಾ, ಅರುಣಾಬೆನ್​ರನ್ನು ಕೊಂದು, ಆಕೆಯನ್ನು ನಿಯೋಜಿಸಲಾಗಿದ್ದ ಅಂಜರ್ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ತೆರಳಿ ತನ್ನ ಅಪರಾಧವನ್ನು ದಿಲೀಪ್​ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಅರುಣಾಬೆನ್ ಅವರು ಕಚ್‌ನ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ASI) ಆಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಅರುಣಾಬೆನ್ ಮತ್ತು ಆಕೆಯ ಲಿವ್​ ಇನ್​ ಸಂಗಾತಿ ದಿಲೀಪ್​, ಅಂಜಾರ್‌ನಲ್ಲಿರುವ ತಮ್ಮ ಮನೆಯಲ್ಲಿ ಜಗಳವಾಡಿದ್ದಾರೆ. ಈ ವೇಳೆ ಆಕೆ ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿಳು ಎಂದು ಆರೋಪಿ ದಿಲೀಪ್​ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಜಗಳ ತಾರಕ್ಕೇರಿದಾಗ ತಾಳ್ಮೆ ಕಳೆದುಕೊಂಡ ದಿಲೀಪ್, ಕೋಪದಿಂದಲೇ ಅರುಣಾಬೆನ್ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆಂದು ಅಂಜರ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಮುಖೇಶ್ ಚೌಧರಿ ಹೇಳಿದ್ದಾರೆ.

ಆರೋಪಿ ದಿಲೀಪ್ ​ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ಸೇವೆ ಸಲ್ಲಿಸುತ್ತಿದ್ದ. ದಿಲೀಪ್​ ಮತ್ತು ಅರುಣಾಬೆನ್​ 2021 ರಿಂದ ಇನ್​ಸ್ಟಾಗ್ರಾಂ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಇಬ್ಬರೂ ದೀರ್ಘಕಾಲದ ಸಂಬಂಧ ಹೊಂದಿದ್ದರು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು. ಅಲ್ಲದೆ ಮದುವೆಯಾಗುವ ಯೋಚನೆ ಕೂಡ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಂಜರ್ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *