ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈ ಎತ್ತಿ ಹೊಡೆಯಲು ಯತ್ನಿಸಿದ್ದರಿಂದ ಅವಮಾನಕ್ಕೊಳಗಾದ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಲಾಟರಿ ಹೊಡೆದಿದ್ದಾರೆ. ಹೌದು ಬೆಳಗಾವಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರಿಂದ ಮುಜುಗರಕ್ಕೀಡಾಗಿ ಸ್ವಯಂ ನಿವೃತ್ತಿಗೆ ಪತ್ರ ಬರೆದಿದ್ದ ನಾರಾಯಣ ಬರಮನಿ ಅವರಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿದೆ.
ಧಾರವಾಡ ಎಎಸ್ಪಿಯಾಗಿದ್ದ ನಾರಾಯಣ ಬರಮನಿ ಅವರಿಗೆ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆ ನೀಡಲಾಗಿದೆ. ಈ ಮೂಲಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ನಾರಾಯಣ ಬರಮನಿ ಅವರನ್ನು ವೇದಿಕೆಗೆ ಕರೆಸಿದ್ದ ಸಿಎಂ ಅಡ್ಡಿಪಡಿಸಲು ಪ್ರತಿಭಟನಾಕಾರರಿಗೆ ಯಾಕೆ ಅವಕಾಶ ನೀಡಿದ್ದಿರಿ ಎಂದು ಪ್ರಶ್ನಿಸಿ ಸಾರ್ವಜನಿಕವಾಗಿ ಹೊಡೆಯಲು ಕೈ ಎತ್ತಿದ್ದರು. ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾದ ನಂತರ ಬರಮನಿ ಅವರು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರ ಭಾರಿ ಟೀಕೆಗೆ ಗುರಿಯಾಗಿತ್ತು. ಕೊನೆಗೆ ನಾರಾಯಣ ಬರಮನಿ ಅವರನ್ನು ಹಿರಿಯ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ನಾರಾಯಣ ಬರಮನಿ ಅವರು ಕೆಲಸಕ್ಕೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ಇದೀಗ ನಾರಾಯಣ ಬರಮನಿ ಅವರಿಗೆ ಮುಂಬಡ್ತಿ ನೀಡಿರುವು ಅಚ್ಚರಿಕೆಗೆ ಕಾರಣವಾಗಿದೆ.
ಅಂದು ಬೆಳಗಾವಿಯಲ್ಲಿ ಆಗಿದ್ದೆನು ?
ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆ ವೇಳೆ ಸಿಎಂ ಭಾಷಣ ಮಾಡುತ್ತಿರುವಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, “ಏಯ್ ಯಾರಿಲ್ಲಿ ಎಸ್ಪಿ ?” ಬಾರಯ್ಯ ಇಲ್ಲಿ ಎಂದು ವೇದಿ ಮೇಲೆ ಕರೆದು ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ್ದರು. ಸಿದ್ದರಾಮಯ್ಯನವರ ಈ ವರ್ತನೆಗೆ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರ ವರ್ತನೆಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು. ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು, ಅವಹೇಳನ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದರು.
ಅವಮಾನದಿಂದ ಬರಮನಿ ಅವರು ಸ್ವಯಂ ನಿವೃತ್ತಿ ಬಯಸಿ ಪತ್ರ ಬರೆದಿದ್ದರು. ಇದರಿಂದ ಮುಜುರಕ್ಕೊಳಗಾಗಿದ್ದ ರಾಜ್ಯ ಸರ್ಕಾರ, ಬರಮನಿ ಅವರಿಗೆ ಮುಂಬಡ್ತಿ ಹುದ್ದೆ ಆಫರ್ ನೀಡಿ ಮನವೊಲಿಸಿತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.