ಕಲಬುರಗಿ: ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ (ಕೆಕೆ) ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಠಾಣೆಯ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ದೀಪ್ಸಿಂಗ್ (33) ಬಂಧಿತ ಆರೋಪಿ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಚಿತ್ತಾಪುರ ಜೈಲಿನಲ್ಲಿ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಕೆ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ರಾತ್ರಿ 1 ಗಂಟೆ ಸುಮಾರಿಗೆ ರೈಲ್ವೆ ಕಂಟ್ರೋಲ್ ರೂಂ’ಗೆ ಕರೆ ಬಂದಿತ್ತು. ವಾಡಿ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ ರೈಲ್ವೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಶ್ವಾನಗಳೊಂದಿಗೆ ಸುಮಾರು 4 ಗಂಟೆ ತಪಾಸಣೆ ಮಾಡಿದರು. ರೈಲಿನ 22 ಬೋಗಿಗಳಲ್ಲಿದ್ದ ಸಾವಿರಾರು ಪ್ರಯಾಣಿಕರನ್ನು ಕೆಳಗೆ ಇಳಿಸಿ, ಇಡಿ ಬೋಗಿಗಳನ್ನು ತಪಾಸಣೆ ಮಾಡಿದರು. ಇದೊಂದು ಹುಸಿ ಬಾಂಬ್ ಕರೆ ಎಂಬುದು ಖಚಿತವಾಯಿತು ಎಂದು ಮಾಹಿತಿ ನೀಡಿದರು.
ಭಯಪಟ್ಟು ಫೋನ್ ಕರೆ: ಇದೆ ರೈಲಿನಲ್ಲಿ ದೆಹಲಿಯಿಂದ ಗುಂತಕಲ್ಗೆ ಪ್ರಯಾಣಿಸುತ್ತಿದ್ದ ದೀಪ್ಸಿಂಗ್ ಎಂಬಾತ ಭಯಪಟ್ಟು ತನ್ನ ತಂದೆಯ ಫೋನ್ ನಂಬರ್ನಿಂದ ಕಂಟ್ರೋಲ್ ರೂಂ’ಗೆ ಕರೆ ಮಾಡಿದ್ದಾನೆ. ಮುಂದೆ ಏನಾಗುತ್ತೆ ಎಂಬ ಭಯದಿಂದ ಮೊಬೈಲ್ ಫ್ಲೈಟ್ ಮೂಡ್ಗೆ ಹಾಕಿ ಏನು ಗೊತ್ತಿಲ್ಲದವರಂತೆ ಕುಳಿತಿದ್ದ. ಟ್ರುಕಾಲರ್ ಆಪ್ನಲ್ಲಿ ಫೋನ್ ಕರೆ ಮಾಡಿದ್ದ ವ್ಯಕ್ತಿಯ ಫೋಟು ಪತ್ತೆಯಾಗಿತ್ತು. ಫೋಟೊ ಆಧಾರದ ಮೇಲೆ ವಾಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಾಡಿ ರೈಲ್ವೆ ಠಾಣೆಯ ಪಿಎಸ್ಐ ವೀರಭದ್ರಪ್ಪ ಎಚ್ ಎಸ್ ತಿಳಿಸಿದ್ದಾರೆ.
ಆರ್ಪಿಎಫ್, ವಾಡಿ ಠಾಣೆಯ ಸಿಬ್ಬಂದಿ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸೇರಿ 40ಕ್ಕೂ ಹೆಚ್ಚು ಸಿಬ್ಬಂದಿ ರಾತ್ರಿ 1.30 ರಿಂದ 4.30ರ ವರೆಗೆ ರೈಲನ್ನು ತಪಾಸಣೆ ಮಾಡಲಾಯಿತು. ಯಾವುದೆ ಬಾಂಬ್ ಇಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಪ್ರಯಾಣಿಕರು ನಿರಾತಂಕವಾದರು ಎಂದರು.