ಸೇಡಂ: ಬೊಮ್ಮನಳ್ಳಿ ಸುದ್ದಿ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಇಬ್ಬರು ಪತ್ರಕರ್ತರನ್ನು ಹಾಗೂ ಲಿಂ.ಶಿವಯ್ಯ ಮಠಪತಿ ಅವರ ಸ್ಮರಣಾರ್ಥ ಕೊಡುವ ಪ್ರಶಸ್ತಿಗೆ ಶೈಕ್ಷಣಿಕ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಬೊಮ್ಮನಳ್ಳಿ ಸುದ್ದಿ ಸಂಪಾದಕ ಸ್ಥಾಪಿಸಿರುವ ಯುವ ಪತ್ರಕರ್ತ ವೀರಭದ್ರ ಮಾಮನಿ ಸ್ಮರಣಾರ್ಥ 16ನೇ ವರ್ಷದ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಕಲಬುರಗಿ ದೃಶ್ಯಮಾಧ್ಯಮ ವರದಿಗಾರ ಅರುಣಕುಮಾರ ಕದಂ ಹಾಗೂ ಬೀದರಿನ ಪತ್ರಕರ್ತ ಅಪ್ಪಾರಾವ ಸೌದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಶಿಕ್ಷಣ ತಜ್ಞ ಲಿಂ.ಶಿವಯ್ಯ ಮಠಪತಿ ಅವರ ಸ್ಮರಣಾರ್ಥ ಮೂರನೇ ವರ್ಷದ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಗುರುಕುಲ ವಿದ್ಯಾಪೀಠದ ಬಸವರಾಜ ಡಿಗ್ಗಾವಿ ಅವರನ್ನು ಆಯ್ಕೆ ಮಾಡಲಾಗಿದೆ, ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಖಜಾಂಚಿ ಸಿದ್ದಪ್ಪ ತಳ್ಳಳ್ಳಿ, ಸ್ಥಾಪಕ ಸಂಚಾಲಕ ನಾಗಯ್ಯ ಸ್ವಾಮಿ ಬೊಮ್ಮನಳ್ಳಿ ಹಾಗೂ ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಅವರು ಆಯ್ಕೆ ಸಮಿತಿಯಲ್ಲಿದ್ದರು. ಜುಲೈ 23 ರಂದು ಬೆಳಿಗ್ಗೆ 10.45ಕ್ಕೆ ಸೇಡಂ ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.