ಕಲಬುರಗಿ: ಕನ್ನಡ ನಾಡಿಗೆ ತನ್ನದೆಯಾದ ಭವ್ಯವಾದ ಇತಿಹಾಸ, ಪರಂಪರೆ ಇದೆ. ನಾನಾ ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ನಾಡನ್ನು, ಅಖಂಡವಾಗಿ ಏಕೀಕರಣಗೊಳಿಸಲು ನಿರಂತರವಾಗಿ ಶ್ರಮಿಸಿದ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಅಭಿಮತಪಟ್ಟರು.
ನಗರದ ಡಬರಾಬಾದ ಕ್ರಾಸ್ ಸಮೀಪದ ಪ್ರಭುದೇವ ನಗರದಲ್ಲಿರುವ ನೀಲಕಂಠೇಶ್ವರ ಪ್ರಾಥಮಿಕ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ಆಲೂರು ವೆಂಕಟರಾಯರ 145ನೇ ಜನ್ಮ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಅವರು, ‘ಕನ್ನಡದ ಕುಲಪುರೋಹಿತ’ ಎಂಬ ಬಿರುದಾಂಕಿತದ ಆಲೂರು ವೆಂಕಟರಾಯರು, ಕನ್ನಡ ನಾಡಿನ ಉದಯಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ. ಕನ್ನಡ ನೆಲದಲ್ಲಿರುವ ಎಲ್ಲರೂ ಒಂದೆಯೆಂದು ಸಾರಿ, ಪ್ರತಿಯೊಬ್ಬರಲ್ಲಿ ನಾಡಿನ ಉದಯದ ಬಗ್ಗೆ ಜಾಗೃತಿಯ ಉಂಟುಮಾಡುವ ಮೂಲಕ ನಾಡಿನ ಹುಟ್ಟಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಷಣ್ಮುಖಯ್ಯ ಹಿರೇಮಠ ಮಾತನಾಡಿ, ಆಲೂರು ವೆಂಕಟರಾಯರು ಅಪ್ಪಟ ಕನ್ನಡಾಭಿಮಾನಿ, ಮಾನವತವಾದಿ, ಸರಳ ಜೀವಿಯಾಗಿದ್ದರು. ಕನ್ನಡಿಗರಲ್ಲಿ ಸ್ವಾಭಿಮಾನ ಜಾಗೃತಗೊಳಿಸಿದ ಮೇರು ವ್ಯಕ್ತಿ. ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡು ನಾಡು-ನುಡಿಯ ಸೇವೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಮಹೇಶ್ವರಿ ಎಸ್.ಹಿರೇಮಠ, ಶರಣ ಚಿಂತಕ ಡಾ.ರಾಜಶೇಖರ ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಶಿಕ್ಷಕಿಯರಾದ ಸುಜಾತಾ ಹಿರೇಮಠ, ಆಶಾರಾಣಿ ಮುಗಳಿ, ಅಂಬಿಕಾ ಪ್ಯಾಟಿ, ರಾಜೇಶ್ವರಿ ಕಟ್ಟಿಮನಿ, ರೇಣುಕಾ ದೊಡ್ಡಮನಿ, ಮಂಗಲಾ ಸಾಳುಂಕೆ, ನಿಂಗಮ್ಮ ದೊರೆ, ನಿರ್ಮಲಾ ಮಾಲಿಪಾಟೀಲ, ಐಶ್ವರ್ಯ ಬಿರಾದಾರ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.