ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಹನ್ನೆರಡನೆ ಶತಮಾನದ ಕ್ರಾಂತಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಮುಂಚೂಣಿಯಲ್ಲಿದ್ದರು. ಶರಣ ಕಾಯಕ ಬದುಕು ಯುವ ಪೀಳಿಗೆಗೆ ದಾರಿದೀಪವಾಗಬೇಕು. ಶರಣರು ಯಾತಕ್ಕಾಗಿ ಹೋರಾಟ ಮಾಡಿದರು, ಅದರ ಉದ್ದೇಶ ಬಗ್ಗೆ ಇಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ಅವರ ವಚನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯವಾಗುವುದು. ಕಾಯಕ ನಿಷ್ಠೆಗೆ ಹೆಸರಾದ ಹಡಪದ ಅಪ್ಪಣ್ಣನವರನ್ನು ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರು ಎಂದರು.
ಸರ್ವ ಸಮುದಾಯಗಳ ಸರ್ವತೋಮುಖ ಏಳಿಗೆ ಬಯಸುವ ವಿಚಾರಗಳು ಶರಣರ ವಚನಗಳಲ್ಲಿವೆ. ಅನ್ಯಾಯ, ಅಸಮಾನತೆ ವಿರುದ್ಧ ಹನ್ನೆರಡನೆ ಶತಮಾನದಲ್ಲಿ ಶರಣರು ವಚನಗಳ ಕ್ರಾಂತಿಯ ಮುಖಾಂತರ ಹೋರಾಡಿದರು. ಈಗಲೂ ಸಮಾಜದಲ್ಲಿ ಅನ್ಯಾಯ ಮುಂದುವರೆಯುತ್ತಿವೆ. ಶರಣರ ಆಶಯದಂತೆ ನಾವು ಹೋರಾಡಿ ಹೋಗಲಾಡಿಸಿ ಮಾನವೀಯ ಮೌಲ್ಯಗಳೊಂದಿಗೆ ಜೀವಿಸಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಮುಖಂಡರಾದ ಶರಣಗೌಡ ಚಾಮನೂರ, ಕಿಶನ ಜಾಧವ, ಶಿವಶಂಕರ ಕಾಶೆಟ್ಟಿ, ಮಲ್ಲಿಕಾರ್ಜುನ ಸಾತಖೇಡ, ಶರಣಪ್ಪ ಹಡಪದ, ಶಿವಯೋಗಿ ನರಿಬೋಳ, ವಿಶ್ವನಾಥ ಹಡಪದ, ಯಲ್ಲಣ್ಣ ಕಟ್ಟಿಮನಿ, ಅಂಬ್ರೇಷ ಹಡಪದ, ಕಿರಣ ಹಡಪದ ಸೇರಿದಂತೆ ಅನೇಕರು ಇದ್ದರು.