ಬೆಂಗಳೂರು: ಹಾಸನದಲ್ಲಿ ಆಗುತ್ತಿರುವ ಸರಣಿ ಸಾವುಗಳು ಇಡಿ ಆರೋಗ್ಯ ಇಲಾಖೆ ಫೀಲ್ಡ್ಗೆ ಇಳಿಯುವಂತೆ ಮಾಡಿದೆ, ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಕಳವಳಗೊಂಡಿದ್ದಾರೆ. ಕೇವಲ 42 ದಿನಗಳಲ್ಲಿ 26 ಜನ ಬಲಿಯಾಗಿದ್ದಾರೆ. ಸಾವಿನ ತನಿಖೆಗೆ ತಜ್ಞರ ಸಮಿತಿ ರಚಿಸಲಾಗಿದೆ.
ಈ ಮಧ್ಯೆ ಹೃದಯಾಘಾತದ ಬಗ್ಗೆ ತಾಂತ್ರಿಕ ಸಮಿತಿ ಪ್ರಾಥಮಿಕ ವರದಿ ಸಿದ್ಧ ಪಡಿಸಿದೆ, ವರದಿಯಲ್ಲಿ ಶಾಕಿಂಗ್ ಅಂಶ ಪತ್ತೆಯಾಗಿದೆ.
ಪ್ರಾಥಮಿಕ ವರದಿಯಲ್ಲಿ ಏನಿದೆ ?
ಈ ಸರಣಿ ಸಾವುಗಳಿಂದ ಸರ್ಕಾರ ಕೂಡ ಆತಂಕಗೊಂಡಿದ್ದು, ಸಾವಿಗೆ ಕಾರಣ ಏನು ಎನ್ನುವುದನ್ನು ತಿಳಿಯಲು ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. 10 ದಿನದಲ್ಲಿ ವರದಿ ನೀಡುವಂತೆ 12 ಜನ ತಜ್ಞರ ಸಮಿತಿಗೆ ಸರ್ಕಾರ ಸೂಚಿಸಿತ್ತು. ಇದರ ಬೆನ್ನಲ್ಲಿ ಇದೀಗ ಪ್ರಾಥಮಿಕ ವರದಿಯನ್ನು ತಜ್ಞರು ಸಿದ್ಧ ಪಡಿಸಿದ್ದಾರೆ.
ಅತಿಯಾದ ಬೊಜ್ಜು, ಮಾಂಸ ಸೇವನೆ, ಧೂಮಪಾನ, ಮದ್ಯಪಾನ ಮತ್ತು ಫಾಸ್ಟ್ ಫುಡ್ ಸೇವನೆಯಿಂದ ಸಾವು ಸಂಭವಿಸಿರುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ರೆಡ್ ಮೀಟ್ ಸೇವನೆಯಿಂದ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಾಧ್ಯತೆ ಇದೆ, ಈ ಬಗ್ಗೆ ಆಳವಾದ ಅಧ್ಯಯನ ಮಾಡಲು ತಾಂತ್ರಿಕ ಸಮಿತಿ ನಿರ್ಧರಿಸಿದೆ. ಇನ್ನು ವರದಿ ಸಲ್ಲಿಸಲು ಕೇವಲ ಒಂದು ವಾರ ಬಾಕಿ ಇದ್ದು, ಅಷ್ಟರ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
ಹಾಸನದಲ್ಲಿ ಹೃದಯಘಾತದ ಸರಣಿ ನಿಲ್ಲುತ್ತಲಿಲ್ಲ. ಮೊನ್ನೆ ನಾಲ್ವರು ಉಸಿರು ನಿಲ್ಲಿಸಿದ್ದರು. ನಿನ್ನೆ ಕೂಡಾ 3 ಬಲಿಯಾಗಿದ್ದಾರೆ. ಹೀಗೆ ಒಟ್ಟು 26 ಜನ ಬಲಿಯಾಗಿದ್ದಾರೆ. ಅದರಲ್ಲೂ ನಿನ್ನೆ ಬಾಣಂತಿ, ಯುವಕರು ಅಷ್ಟೇ ಅಲ್ಲ ಸರ್ಕಾರಿ ಆಸ್ಪತ್ರೆ ವೈದ್ಯನೇ ಹಾರ್ಟ್ಅಟ್ಯಾಕ್ಗೆ ಬಲಿ ಆಗಿದ್ದಾರೆ.
ಸರಣಿ ಸಾವು ಎಲ್ಲರ ಅಲರ್ಟ್ಗೆ ಕಾರಣವಾಗಿದೆ. ರಾಜ್ಯದ 86 ತಾಲೂಕುಗಳಲ್ಲಿ ಇರುವ ಸ್ಟೆಮಿ ಯೋಜನೆಯನ್ನ ಎಲ್ಲಾ ತಾಲೂಕಿಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಇದರ ನಡುವೆ CPR ಅಂದ್ರೆ ಹಾರ್ಟ್ಅಟ್ಯಾಕ್ ವೇಳೆ ರೋಗಿಯ ಎದೆಯನ್ನ ಒತ್ತಿ ಹೃದಯ ಬಡಿತವನ್ನು ಮರುಚಾಲನೆಗೊಳಿಸುವ ಪ್ರಾಥಮಿಕ ಚಿಕಿತ್ಸಾ ಕ್ರಮದ ಬಗ್ಗೆ ಎಲ್ಲರಿಗೂ ತರಬೇತಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.