ತುಮಕೂರು: ಜಿಲ್ಲೆ ತಿಪಟೂರು ತಾಲೂಕಿನ ಶಂಕರ್ ಮೂರ್ತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ಶಂಕರ್ ಮೂರ್ತಿ ಮೃತ ದೇಹ ನೊಣವಿನಕೆರೆ ಬಳಿ ಪತ್ತೆಯಾಗಿದೆ, ಪತ್ನಿಯೇ ಕೊಲೆ ಮಾಡಿ ಗಂಡ ಕಾಣೆಯಾಗಿದ್ದಾನೆ ಎಂದು ದೂರು ನೀಡಿ ನಾಟಕವಾಡಿರುವುದು ಬಟಾಬಯಲಾಗಿದೆ.
ನಾಪತ್ತೆಯಾದ ಐದು ದಿನಗಳ ನಂತರ ಶಂಕರ್ ಮೂರ್ತಿ (51) ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ, ಪತ್ನಿ ಸುಮಂಗಲಾ ತನ್ನ ಸಂಬಂಧಿ ನಾಗರಾಜನೊಂದಿಗೆ ಸೇರಿಕೊಂಡು ಶಂಕರ್ ಮೂರ್ತಿಯನ್ನು ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಸುಮಾರು 30 ಕಿ.ಮೀ ದೂರದ ತರುವೇಕೆರೆ ತಾಲೂಕಿನ ದಂಡನಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯ ಜಮೀನಿನಲ್ಲಿನ ಬಾವಿಗೆ ಎಸೆದಿದ್ದಾರೆ.
ಜೂನ್ 24 ರಂದು ನೊಣವಿನಕೆರೆಯ ಕಾಡುಶೆಟ್ಟಿಹಳ್ಳಿಯಿಂದ ಶಂಕರ್ ಮೂರ್ತಿ ಕಾಣೆಯಾಗಿದ್ದರು. ಈ ಸಂಬಂಧ ಆತಂಕಗೊಂಡ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು. ಪ್ರಕರಣದ ತನಿಖೆ ವೇಳೆ ಖಾರದಪುಡಿ ಕೊಟ್ಟ ಸುಳಿವಿನಿಂದ ಶಂಕರ್ ಪತ್ನಿ ಸುಮಂಗಲ ಮೇಲೆ ಅನುಮಾನ ಬಂದಿದ್ದು, ಕೂಡಲೇ ಪೊಲೀಸರು ವಿಚಾರಣೆ ನಡೆಸಿದಾಗ ಪತಿಯ ಹತ್ಯೆಗೆ ಪತ್ನಿ ಸುಮಂಗಲ ಹಾಗೂ ಸಂಬಂಧಿ ನಾಗರಾಜ್ ಭಾಗಿಯಾಗಿರುವುದು ನಿಖರವಾಗಿದೆ.
ಹತ್ಯೆಯನ್ನು ಪೂರ್ವನಿಯೋಜಿತವಾಗಿ ಜೂನ್ 24ರ ರಾತ್ರಿ ರೂಪಿಸಿ ಕೈಗೊಂಡಿದ್ದು, ಕಾರದಪುಡಿ ಹಾಕಿ ತಲೆ ಹಾಗೂ ಕಾಲಿಗೆ ಬಲವಾಗಿ ಹೊಡೆದು, ಬಳಿಕ ಕುತ್ತಿಗೆ ಹಿಸುಕಿ ಶಂಕರ್ ಮೂರ್ತಿಯನ್ನು ಕೊಂದಿದ್ದರು. ಬಳಿಕ ಮೃತ ದೇಹವನ್ನು ಚೀಲದಲ್ಲಿ ಹಾಕಿ, ಹೊಂಡಾ ಆಕ್ಟಿವಾ ಬೈಕ್ ನಲ್ಲಿ ಗುಬ್ಬಿ ತಾಲೂಕಿನ ದೊಡ್ಡಗುಣಿಯ ಅರಣ್ಯ ಪ್ರದೇಶದ ಬಾವಿ ಬಳಿಯ ಪಂಪ್ಹೌಸ್ ಗೆ ತೆಗೆದುಕೊಂಡು ಹೋಗಿ ಬಿಸಾಡಿದ್ದರು.
ಕೊಲೆ ಸುಳಿವು ಕೊಟ್ಟ ಖಾರದಪುಡಿ
ಮೊದಲು ನಾನ್ವಿನಕೆರೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ತನಿಖೆ ನಡೆಸುವಾಗ ಶಂಕರಮೂರ್ತಿ ಮಲಗುವ ಕೋಣೆಯಲ್ಲಿ ಮೆಣಸಿನ ಪುಡಿ ಎರಚಿರುವ ಗುರುತುಗಳು ಸಿಕ್ಕಿವೆ. ಇದರಿಂದ ಪೊಲೀಸರಿಗೆ ಅನುಮಾನ ಬಂದಿದೆ. ಪೊಲೀಸರು ಸುಮಂಗಲಾನನ್ನು ವಿಚಾರಣೆ ಮಾಡಿದ್ದಾರೆ. ಆಕೆಯ ಮೊಬೈಲ್ನ ಸಿಡಿಆರ್ ಪರಿಶೀಲನೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕೊನೆಗೆ ಸುಮಂಗಲಾ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವುದನ್ನು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬೆದರಿಕೆ ಹಾಕಿದ್ದಕ್ಕೆ ಹತ್ಯೆ
ಮೃತ ಪತಿ ಶಂಕರ್ ಮೂರ್ತಿ ಹಿಂದಿನ ಅಕ್ರಮ ಸಂಬಂಧದ ಶಂಕೆಯಿಂದಾಗಿ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿದ್ದವು. ಗಲಾಟೆ ದಿನೇ ದಿನೇ ಹೆಚ್ಚಾಗಿದ್ದರಿಂದ ಕಳೆದ ಆರು ತಿಂಗಳ ಹಿಂದೆ ಶಂಕರ್ ಮೂರ್ತಿ ಹಾಗೂ ಸುಮಂಗಲಾ ದೂರಾಗಿದ್ದರು. ಬಳಿಕ ಸುಮಂಗಲಾ ಮಗಳ ಮದುವೆಯನ್ನು ಪತಿಗೆ ತಿಳಿಸದೆ ನೆರವೇರಿಸಿದ್ದಳು. ಇದು ಪತ್ನಿ ಶಂಕರ ಮೂರ್ತಿಯನ್ನು ಕೆರಳಿಸಿದ್ದು, ಪತ್ನಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಆತಂಕದಿಂದಲೇ ಸುಮಂಗಲಾ ತನ್ನ ಸಂಬಂಧಿ ನಾಗರಾಜ್ ನೊಂದಿಗೆ ಪತಿ ಶಂಕರಮೂರ್ತಿಯನ್ನು ಕೊಲೆ ಮಾಡಿರುವುದಾಗಿ ಸ್ವತಃ ಸುಮಂಗಲ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ.
ಕೇವಲ ಇದೊಂದೆ ಕಾರಣಕ್ಕೆ ಕೊಲೆ ಮಾಡಲಾಗಿದೆಯಾ ಅಥವಾ ಈ ಕೊಲೆಯ ಹಿಂದೆ ಬೇರೆ ಕಾರಣವೆನಾದರು ಇದೆಯಾ ಎನ್ನುವ ಬಗ್ಗೆ ನೊಣವಿನಕೆರೆ ಪೊಲೀಸರು ಸುಮಂಗಲ ಮತ್ತು ನಾಗರಾಜ್ ನನ್ನು ಇನ್ನಷ್ಟು ವಿಚಾರಣೆಗೊಳಪಡಿಸಿದ್ದಾರೆ.