ಕಲಬುರಗಿ: ಮಾನವನು ಆರೋಗ್ಯಪೂರ್ಣವಾಗಿ ಜೀವಿಸಲು ಶುದ್ಧವಾದ ಆಕ್ಸಿಜನ್, ಕುಡಿಯುವ ನೀರು ಮತ್ತು ಆಹಾರ ಅವಶ್ಯಕ. ನಮ್ಮ ದೇಹಕ್ಕೆ ಬರುವ ಅನೇಕ ಕಾಯಿಲೆಗಳು ಇವುಗಳಿಗೆ ಸಂಬಂಧಿಸಿವೆ. ಶುಚಿಯಾದ, ಸತ್ವಯುತ ಮತ್ತು ಸಮತೋಲಿತವಾದ ಆಹಾರದ ಸೇವನೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸನ್’ಲೈಟ್ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಆಹಾರ ಸುರಕ್ಷತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ದುರಾಸೆಯಿಂದ ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆ, ವಿಷಪೂರಿತ ಪದಾರ್ಥಗಳನ್ನು ಬೆರೆಸುತ್ತಿರುವುದು ಅಮಾನವೀಯ ಕೃತ್ಯ ಹಾಗೂ ಅಪರಾದವಾಗಿದೆ. ಇಂತಹ ಆಹಾರವನ್ನು ಸೇವಿಸುವದರಿಂದ ಸಹಜವಾಗಿ ಆರೋಗ್ಯ ಹಾಳಾಗುತ್ತದೆ. ಆಹಾರದ ಸುರಕ್ಷತೆಗೆ ಸಂಬಂಧಿಸಿದಂತೆ ಅಂಗಡಿ, ಬೇಕರಿ, ಉಪಹಾರ ಗೃಹ, ತಳ್ಳುಗಾಡಿ ಸೇರಿದಂತೆ ಎಲ್ಲರು ಕಾಳಜಿ ವಹಿಸಬೇಕಾದದ್ದು ತುಂಬಾ ಅಗತ್ಯವಾಗಿದೆ. ಕಲೆಬೆರಕೆಯಿಂದ ಕೂಡಿದ, ಎಗ್ಮಾರ್ಕ್ ಇರದ, ಪರೀಕ್ಷೆಗೆ ಒಳಪಡದ ವಸ್ತುಗಳಿಂದ ಗ್ರಾಹಕರು ಎಚ್ಚರ ವಹಿಸಬೇಕು. ಸಮತೋಲನೆಯುತ, ಎಲ್ಲಾ ಪೋಷಕಾಂಶಗಳುಳ್ಳ, ಕಲಬೆರಕೆ ರಹಿತ, ಸುರಕ್ಷಿತ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರತ್ವಿ ಕೋರವಾರ ಮತ್ವಿತು ವಿದ್ಯಾರ್ಥಿಗಳು ಇದ್ದರು.