ಗಿಡಗಳು ನೆಟ್ಟು ಪರಿಸರ ಸಂರಕ್ಷಣೆ ಮಾಡಿ

ಜಿಲ್ಲೆ

ಕಲಬುರಗಿ: ಎಲ್ಲರು ಗಿಡಗಳನ್ನು ನೆಟ್ಟು ಮಗುವಿನಂತೆ ಪೋಷಣೆ ಮಾಡಿ ಪರಿಸರ ಸಂರಕ್ಷಣೆ ಮಾಡುವ ಕಾರ್ಯ ಸಾಮೂಹಿಕವಾಗಿ ಮಾಡೋಣ ಎಂದು ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಹೇಳಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್’ಎಸ್’ಎಸ್ ಘಟಕದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಪರಿಸರ ದಿನಾಚರಣೆ’ಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಸಿ ಮಾತನಾಡಿದ ಅವರು, ಪರಿಸರ ಸಮತೋಲನಕ್ಕೆ ಶೇ.33ರಷ್ಟು ಅರಣ್ಯ ಪ್ರದೇಶದ ಅವಶ್ಯಕತೆಯಿದ್ದು, ಇದರ ಪ್ರಮಾಣ ಕಡಿಮೆ ಇರುವುದರಿಂದ ಪರಿಸರ ಅಸಮತೋಲನವಾಗುತ್ತಿದೆ ಎಂದರು.

ಎನ್’ಎಸ್’ಎಸ್ ಅಧಿಕಾರಿ ಎಚ್.ಬಿ ಪಾಟೀಲ ಮಾತನಾಡಿ, ಪರಿಸರ ಸಮತೋಲನವಾಗಿಯೇ ಹುಟ್ಟಿದೆ. ಆದರೆ ಅದರ ಮೇಲೆ ಮಾನವ ದಬ್ಬಾಳಿಕೆ ಮಾಡಿ, ತನಗಿಷ್ಟದಂತೆ ಬದಲಾಯಿಸಬೇಕೆಂಬ ಪ್ರಯತ್ನಕ್ಕೆ ಕೈಹಾಕಿರುವುದರ ಪರಿಣಾಮವಾಗಿ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಆದ್ದರಿಂದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಪರಿಸರ ಮೂಲ ಸ್ಥಿತಿಯನ್ನು ಕಾಪಾಡುವುದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅಸ್ಮಾ ಜಬೀನ್, ಮಲ್ಲಿಕಾರ್ಜುನ ದೊಡ್ಡಮನಿ, ನಯಿಮಾ ನಾಹಿದ್, ಸುವರ್ಣಲತಾ ಭಂಡಾರಿ, ರೇಣುಕಾ ಚಿಕ್ಕಮೇಟಿ, ಕೀರ್ತಿ ಭುಜುರಕೆ, ದುಂಡಪ್ಪ ಯರಗೋಳ, ಗ್ರಂಥಪಾಲಕ ಲಿಂಗರಾಜ ಹಿರೇಗೌಡ, ಪ್ರ.ದ.ಸ ಪ್ರೇಮಾ ಸುರಪುರ, ಶಿಕ್ಷಣ ಪ್ರೇಮಿ ಬಸವರಾಜ ಹಡಪದ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *