ಬೆಳಗಾವಿ: ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ವೇದಿಕೆ ಪ್ರವೇಶಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿ ವೇದಿಕೆ ಮೇಲೆಯೆ ಧಾರವಾಡದ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ವಿರುದ್ಧ ಗರಂ ಆದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.
ಬೆಲೆ ಏರಿಕೆ ವಿರೋಧಿಸಿ ಇಂದು ಕಾಂಗ್ರೆಸ್ ಪ್ರತಿಭಟನಾ ಸಭಾ ಆಯೋಜಿಸಿತ್ತು. ಸಿಎಂ ಮಾತನಾಡುವಾಗ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಈ ವೇಳೆ ಸಂಯಮ ಕಳೆದುಕೊಂಡ ಸಿಎಂ ಹೆಚ್ಚುವರಿ ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡರು.
ಆಗಿದ್ದು ಏನು ?
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಇಂದು ಕಾಂಗ್ರೆಸ್ ಸಮಾವೇಶ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆಗಮಿಸಿದ್ದರು. ಬೇರೆ ನಾಯಕರ ಭಾಷಣದವರೆಗೆ ಸುಮ್ಮನೆ ಕುಳಿತಿದ್ದ ಕಾರ್ಯಕರ್ತೆಯರು ಸಿಎಂ ಭಾಷಣ ಮಾಡುವಾಗ ಕಪ್ಪು ಪಟ್ಟಿ ತೋರಿಸಿ ಪ್ರತಿಭಟಿಸಿದರು.
ಇದ್ದಕ್ಕಿದ್ದಂತೆ ತನ್ನ ಮುಂಭಾಗದಲ್ಲಿ ಪ್ರತಿಭಟನೆ ನೋಡಿ ಸಿಎಂ ಒಂದು ಕ್ಷಣ ಭಾಷಣ ಮಾಡುವುದನ್ನು ನಿಲ್ಲಿಸಿದ್ದಾರೆ. ನಿಲ್ಲಿಸಿದ ಬಳಿಕ ಯಾರದು ಎಸ್ಪಿ ಎಂದು ಕೇಳಿ ವೇದಿಕೆಗೆ ಬರುವಂತೆ ಹೇಳಿದ್ದಾರೆ. ಹೆಚ್ಚುವರಿ ಎಸ್ಪಿ ಬರುತ್ತಿದ್ದಂತೆ ಏನ್ರಿ ಇದು, ಏನು ಮಾಡ್ತಾ ಇದ್ದಿರಿ ಎಂದು ಪ್ರಶ್ನಿಸಿ ಸಿಟ್ಟು ಹೊರಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಸಚಿವ ಎಂ.ಬಿ ಪಾಟೀಲ ಅವರು ಸಿಎಂ ಹತ್ತಿರ ಬಂದು ಸಮಾಧಾನ ಮಾಡಿದ್ದಾರೆ.