ಬೆಂಗಳೂರು: ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಘೋಷಣೆ ಮಾಡಿದ್ದಾರೆ.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಷ್ಕರ ಈ ಸಮಯದಿಂದಲೇ ವಾಪಸ್ ಪಡೆಯುತ್ತೆನೆ. ಸಚಿವರು ಬಹುತೇಕ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೆನೆ.
ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ 20 ವರ್ಷಗಳಿಂದ ಈಡೇರದ ಬೇಡಿಕೆ ಸಚಿವ ರಾಮಲಿಂಗಾರೆಡ್ಡಿ ಈಡೇರಿಸಿದ್ದಾರೆ ಎಂದರು.
ಲಾರಿ ಮುಷ್ಕರದಿಂದಾದ ತೊಂದರೆಗೆ ಜನರಲ್ಲಿ ವಿಷಾದ ವ್ಯಕ್ತಪಡಿಸುತ್ತೆನೆ. ಒಂದು ದಿನದ ಲಾರಿ ಮುಷ್ಕರದಿಂದ ಅಂದಾಜು 4,500 ಕೋಟಿ ರೂ ನಷ್ಟ ಉಂಟಾಗಿರಬಹುದು ಎಂದ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಹೇಳಿದ್ದಾರೆ.
ದಂಡ ಕಡಿತ ಮಾಡುವ ಬಗ್ಗೆ ಚರ್ಚೆ ಮಾಡ್ತಿನಿ: ರಾಮಲಿಂಗಾರೆಡ್ಡಿ
ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೆನೆ. ಲಾರಿ ಮಾಲೀಕರ ಸಂಘದವರು ಪ್ರಮುಖವಾಗಿ 6 ಬೇಡಿಕೆ ಇಟ್ಟಿದ್ದರು. ಗಡಿ ಭಾಗದಲ್ಲಿ ಟೋಲ್ ತೆಗೆಯಲು ಸಭೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಮೂರು ದಿನಗಳ ಬಳಿಕ ವರದಿ ತರಸಿಕೊಳ್ಳುತ್ತೆನೆ. ನೋ ಎಂಟ್ರಿ ಬೋರ್ಡ್ ಬದಲಾವಣೆ ಕುರಿತು ಚರ್ಚೆ ಮಾಡುತ್ತೆನೆ. ಲಾರಿ ಮಾಲೀಕರಿಗೆ ವಿಧಿಸುವ ದಂಡ ಕಡಿತ ಮಾಡುವ ಬಗ್ಗೆ ಚರ್ಚೆ ಮಾಡುತ್ತೆನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಲಾರಿ ಮಾಲೀಕರ ಮುಷ್ಕರ ಏಕೆ ?
ಡಿಸೇಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಸೋಮವಾರ ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ ಆರಂಭಿಸಿದ್ದರು. ಈ ಸಂಬಂಧ ಲಾರಿ ಮಾಲೀಕರ ಸಂಘದ ಜೊತೆಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಮೊದಲನೇ ಸಭೆ ನಡೆಸಿದ್ದರು. ಆದರೆ ಈ ಸಭೆ ಕೂಡ ವಿಫಲಾವಾಗಿತ್ತು. ನಂತರ ಸಚಿವ ರಾಮಲಿಂಗಾರೆಡ್ಡಿ ಜೊತೆಗೆ ನಡೆದ ಎರಡನೇ ಸಭೆ ಫಲಕೊಟ್ಟಿದೆ.