ಕಲಬುರಗಿ: ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅಕ್ಕಮಹಾದೇವಿಯವರು ವಿಶ್ವದ ಪ್ರಥಮ ಸ್ತ್ರೀವಾದಿ ಚಿಂತಕರಾಗಿದ್ದಾರೆ ಎಂದು ಶರಣ ಚಿಂತಕಿ ಜಯಶ್ರೀ ಎಚ್ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಶನಿವಾರ ಬಸವೇಶ್ವರ ಸಮಾಜ ಸೇವಾ ಬಳಗದ ಐತಿಹಾಸಿಕ, ಸಾರ್ವಕಾಲಿಕ ವಿಶ್ವ ದಾಖಲೆಯ 5000ನೇ ಕಾರ್ಯಕ್ರಮವಾದ ‘ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ಜಯಂತಿ’ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮಹಿಳೆಯು ಅಕ್ಕನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಹಾಗೂ ಶರಣ ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಅಕ್ಕಮಹಾದೇವಿಯವರು ಅನುಭವಿಸಿದ ಕಷ್ಟ, ತೊಂದರೆ, ಪರೀಕ್ಷೆಗಳು ಬಹಳಷ್ಟು. ಅವೆಲ್ಲವುಗಳನ್ನು ಮೆಟ್ಟಿ ನಿಂತು, ಅಪ್ರತಿಮ ಸಾಧನೆ ಮಾಡುವ ಮೂಲಕ ಮಹಿಳಾ ಕುಲಕ್ಕೆ ಶಿರೋಮಣಿಯಾಗಿದ್ದಾರೆ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಇಡಿ ಜೀವನದುದ್ದಕ್ಕೂ ಪ್ರಯತ್ನಿಸಿದ್ದಾರೆ. ಕನ್ನಡದ ಮೊದಲ ಕವಯತ್ರಿಯಾಗಿದ್ದಾರೆ. ತಮ್ಮದೆಯಾದ ಅನುಭಾವದ ವಚನಗಳು ರಚಿಸಿ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಸಿದ್ದಾರೆ. ಅಕ್ಕಮಹಾದೇವಿಯವರು ಸಮಸ್ತ ಮಹಿಳಾ ಲೋಕಕ್ಕೆ ಆದರ್ಶಪ್ರಾಯವಾಗಿರಾಗಿದ್ದಾರೆ. ಅಕ್ಕನ ತತ್ವ, ತ್ಯಾಗ, ಆದರ್ಶ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶರಣ ಚಿಂತಕ ಡಾ.ರಾಜಶೇಖರ ಪಾಟೀಲ, ಸಮಾಜ ಸೇವಕ ಅಪ್ಪಾರಾವ ಜವಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.