ಬೆಂಗಳೂರು: ನಾವು ಪ್ರತಿನಿತ್ಯ ಸೇವಿಸುವ ಆಹಾರಗಳಲ್ಲಿ ಕಲಬೆರಕೆ, ವಿಷಾಂಶ ಹಾಗೂ ಕ್ಯಾನ್ಸರ್ ಕಾರಕ ಅಂಶಗಳಿರುವ ಬಗ್ಗೆ ಆಹಾರ ಇಲಾಖೆಯ ಪ್ರಯೋಗಾಲಯ ವರದಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಆಘಾತಕಾರಿ ವಿಚಾರಗಳು ಬಹಿರಂಗವಾಗುತ್ತಲೇ ಇವೆ. ಈಗ ವಾಟರ್ ಬಾಟಲ್ ನೀರಿನ ಸರದಿ. ಬಾಟಲ್ ಮೂಲಕ ಪೂರೈಕೆಯಾಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ತಿಳಿಸಿದೆ. ಜೊತೆಗೆ ಕೋವಾ ಕೂಡ ಕಲಬೆರಕೆಯುಕ್ತ ಎಂದು ತಿಳಿಸಿದೆ.
ನಕಲಿ ವಾಟರ್ ಬಾಟಲ್ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಆಹಾರ ಇಲಾಖೆ ಸಮರ ಮುಂದುವರಿಸಿದೆ. ವಿವಿಧೆಡೆ ದಾಳಿ ನಡೆಸಿ ವಾಟರ್ ಬಾಟಲ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಕೋವಾದಲ್ಲೂ ಕಲಬೆರಕೆ ಪತ್ತೆ
ಸಿಹಿ ತಿಂಡಿಗಳಿಗೆ ಬಳಸುವ ಕೋವಾದಲ್ಲಿ ಕೂಡ ಕಲಬೆರಕೆ ಪತ್ತೆಯಾಗಿರುವದಾಗಿ ಆಹಾರ ಇಲಾಖೆಯ ಪರೀಕ್ಷೆಯ ವರದಿ ತಿಳಿಸಿದೆ. ಇದರೊಂದಿಗೆ ಪನೀರ್ ನಂತರ ಈಗ ಕೋವಾ ಕೂಡ ಆರೋಗ್ಯಕ್ಕೆ ಮಾರಕ ಎಂಬುದು ಬೆಳಕಿಗೆ ಬಂದಂತಾಗಿದೆ.
ಮತ್ತೊಂದೆಡೆ ಈಗಾಗಲೇ ಪನೀರ್ ಮತ್ತು ಐಸ್ ಕ್ರೀಮ್ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿರುವ ಆಹಾರ ಇಲಾಖೆ ಇದೀಗ ಮತ್ತೊಂದು ಸುತ್ತಿನ ಕಾರ್ಯಾಚರಣೆ ಮುಂದುವರಿಸಿದೆ. ಬೆಂಗಳೂರಿನ ವಿವಿಧ ಕಡೆಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪನೀರ್ ಹಾಗೂ ಐಸ್ ಕ್ರೀಮ್ ಗಳಲ್ಲಿ ರಾಸಾಯನಿಕ ಬಳಕೆ ಆರೋಪದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ.
ಇಡ್ಲಿ, ಗೋಬಿ ಸೇರಿದಂತೆ ಅನೇಕ ಆಹಾರಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಆಹಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಜೊತೆಗೆ, ಆಹಾರಗಳ ತಯಾರಿ ಹಾಗೂ ಮಾರಾಟ ಸಂಬಂಧ ಕೆಲವೊಂದು ಕಠಿಣ ನಿಯಮ ಜಾರಿ ಮಾಡಿತ್ತು. ಆ ನಂತರ ಕುಡಿಯುವ ನೀರು ಸುರಕ್ಷಿತವೇ ಎಂಬ ಬಗ್ಗೆ ಪರಿಶೀಲನೆಗೆ ಮುಂದಾಗಿತ್ತು. ಈಗ ಪರೀಕ್ಷಾ ವರದಿ ಬಂದಿದ್ದು, ಆಘಾತಕಾರಿ ವಿಚಾರ ಬಯಲಾಗಿದೆ. ಈ ಬಗ್ಗೆ ಸರ್ಕಾರ ಇನ್ನೇನು ಕ್ರಮ ಕೈಗೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.