ಸುದ್ದಿ ಸಂಗ್ರಹ
ಶಹಾಬಾದ್: ಪಠ್ಯ ಶಿಕ್ಷಣದ ಜೊತೆಗೆ ಸಮುದಾಯದ ಪರಿಚಯ, ಸೇವೆಯ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರೀಡೆಯ ಮೂಲಕ ಸಮಗ್ರತೆ ಪರಿಕಲ್ಪನೆ ಸೇರಿದಂತೆ ಹಲವು ಚಿಂತನೆಗೆ ಎನ್ಎಸ್ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್ ಗುರುರಾಜ ಸಂಗಾವಿ ಹೇಳಿದರು.
ನಗರದ ಎಸ್ಎಸ್ ಮರಗೋಳ ಕಾಲೇಜಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಎನ್ಎಸ್ಎಸ್ ಮತ್ತು ಬಿ ಘಟಕದ ವಾರ್ಷಿಕ ವಿಶೇಷ ಶಿಬಿರವ ಉದ್ಘಾಟಿಸಿ ಮಾತನಾಡಿದ ಅವರು, ಬದಲಾವಣೆಯ ಬೆಳಕು ಕೇವಲ ಶಿಬಿರದಲ್ಲಿ ಮಾತ್ರವಲ್ಲ, ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸಿದಾಗ ಮಾತ್ರ ಎನ್ಎಸ್ಎಸ್ನ ನಿಜವಾದ ಪ್ರಾಮುಖ್ಯತೆ ತಿಳಿಯುವದು ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೋ. ಕೆಬಿ ಬಿಲ್ಲವ ಮಾತನಾಡಿ, ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿ ಕೊಳ್ಳುವುದರ ಜೊತೆಗೆ ಬದಲಾವಣೆ ಕಾಣಲು ಶಿಬಿರ ಪೂರಕ, ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ, ಸಂಸ್ಕಾರ, ಸಂಸ್ಕೃತಿಯನ್ನು ಕಾಣಬಹುದು. ರಾಷ್ಟ್ರೀಯ ಸೇವಾ ಯೋಜನೆಯಿಂದ ಉತ್ತಮ ನಾಗರಿಕತ್ವದ ನೀತಿ ಪಾಠ ಕಲಿಯಲು ಸಾಧ್ಯ, ಅದನ್ನು ಅರ್ಥ ಮಾಡಿಕೊಂಡು ಎಲ್ಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ವೇದಿಕೆ ಮೇಲೆ ಎನ್ಎಸ್ಎಸ್ ಯೋಜನಾಧಿಕಾರಿ ಪ್ರೊ. ಎಮ್’ಕೆ ಬೋತಗಿ, ಡಾ. ಲಕ್ಷ್ಮಣ ಟಿ ಇದ್ದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವಕುಮಾರ ಕುಸಾಳೆ, ಕುಪೆಂದ್ರ ಚವ್ಹಾಣ, ಡಾ. ಜಿ.ಆರ ಸ್ಥಾವರಮಠ, ಬಸವರಾಜ ಹಿರೇಮಠ, ಡಾ.ಸುರೇಖಾ ನಾಟಿಕಾರ, ಡಾ. ಕಾವೇರಿ, ನಾಗರಾಜ ದೇವತ್ಕಲ್, ಸಾಯಿರಾಂ ಬಸನಗೌಡ ಪಾಟೀಲ ಸೇರಿದಂತೆ ಎನ್ಎಸ್ಎಸ್ ಮತ್ತು ಬಿ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಹಣಮಂತಪ್ಪ ಸೇಡಂಕರ್ ಸ್ವಾಗತಿಸಿ, ನಿರೂಪಿಸಿದರು, ಶಿವಶಂಕರ ಹಿರೇಮಠ ವಂದಿಸಿದರು.